ಮಹಾತ್ಮಗಾಂಧಿ ಭಿನ್ನ ಸನಾತನಿ
ನಾನೊಬ್ಬ ಸನಾತನಿ ಹಿಂದೂ ಎಂದು ಮಹಾತ್ಮ ಗಾಂಧೀಜಿಯವರು ಹೇಳಿಕೊಂಡರೂ ತಮ್ಮದೇ ಆದ ಮಾನವೀಯ ಮೌಲ್ಯಗಳ ಬೆಳಕಿನ ಮೂಲಕವೇ ಅವರು ಹಿಂದೂ ಧರ್ಮವನ್ನು ಗುರುತಿಸುತ್ತಾರೆ.
ವಿಶಾಲ ಕಲ್ಪನೆಗೆ ಅವಕಾಶವಿಲ್ಲದ ಹಿಂದೂ ಧರ್ಮ, ಕೋಮು ಭಾವನೆಗಳನ್ನು ಕೆರಳಿಸುವ ಹಿಂದೂ ಧರ್ಮ, ಜಾತಿ ಮತ್ತು ಅಸ್ಪ್ರಶ್ಯತೆಯನ್ನು ಆಚರಿಸುವ ಹಿಂದೂ ಧರ್ಮ, ಗರ್ವದಿಂದ ಹೇಳಿರಿ ನಾವು ಹಿಂದೂಗಳು ಎಂದು ಹೇಳುವವರ ಹಿಂದೂ ಧರ್ಮ,
ಗಾಂಧೀಜಿಯವರ ಹಿಂದೂ ಧರ್ಮ ಆಗಿರಲಿಲ್ಲ. ಹಿಂದೂ ಧರ್ಮ ಪಟ್ಟು ಬಿಡದ ಸತ್ಯಾನ್ವೇಷಣೆ ಎಂಬುವುದರಲ್ಲಿ ಗಾಂಧಿ ಅವರಿಗೆ ಅಚಲವಾದ ನಂಬಿಕೆ ಇತ್ತು. ಧರ್ಮ ಗ್ರಂಥವಾದ ಭಗವದ್ಗೀತೆ ಗಾಂಧಿ
ಅವರಿಗೆ ಬಾಹ್ಯ ಪ್ರಪಂಚದ ಗ್ರಂಥವಾಗಿದ್ದಿಲ್ಲ. ಮನುಷ್ಯನ ಆಂತರಿಕ ಜಗತ್ತು ಮತ್ತು ಅಲ್ಲಿರುವ
ಕುರುಕ್ಷೇತ್ರಕ್ಕೆ ಸಂಬಂಧಿಸಿದುದಾಗಿತ್ತು. ದುರ್ಯೋಧನನ ಮತ್ತು ಅವನ ಪಕ್ಷದವರನ್ನು ನಾನು ಮಾನವನಲ್ಲಿರುವ ಅಧಮ ಪ್ರವೃತ್ತಿಗಳೆಂದೂ ಅರ್ಜುನ ಮತ್ತು ಅವನ ಪಕ್ಷದವರನ್ನು ಉತ್ತಮ ಪ್ರವೃತ್ತಿಗಳೆಂದು ಪರಿಗಣಿಸುತ್ತೇನೆ.
ನಮ್ಮ ಸ್ವಂತ ದೇಹವೇ ಯುದ್ಧರಂಗ ಈ ಎರಡೂ ಪಕ್ಷಗಳಲ್ಲಿ ಶಾಶ್ವತವಾದ ಯುದ್ಧ ನಡೆಯುತ್ತಿದೆ. ಋಷಿಕವಿ ಅದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾನೆ. ಶುದ್ಧ ಹೃದಯದಲ್ಲಿ ಸದಾ ಪಿಸುನುಡಿ ನುಡಿಯುತ್ತಿರುವ ಅಂತರ್ಯಾಮಿ ಕೃಷ್ಣ .ಗಡಿಯಾರದಂತೆ ಹೃದಯಕ್ಕೆ ಶುದ್ಧತೆಯ ಕೀಲು ಕೊಡುವುದು ಅವಶ್ಯಕ. ಇಲ್ಲದಿದ್ದರೆ ಅಂತರ್ಯಾಮಿ ಮಾತನಾಡುವುದನ್ನು ನಿಲ್ಲಿಸುತ್ತಾನೆ ಎಂದು ಮಹಾತ್ಮ ಗಾಂಧೀಜಿಯವರು ನಮಗೆ ಕಿವಿಮಾತು ಹೇಳಿದ್ದಾರೆ.
– ರಂಜಾನ್ ದರ್ಗಾ.
ಹಿರಿಯ ಲೇಖಕರು ಧಾರವಾಡ.