ಪ್ರಚಲಿತ ಸಂಗತಿ

ಜಾತಿ ಗಣತಿ ವಿರೋಧಿಸುತ್ತಿರುವ ಜಾತಿವಾದಿ ಲಿಂಗಾಯತರು

ಚರ್ಚೆಗಾಗಿ

Spread the love

ಜಾತಿಗಣತಿ ವರದಿ ವಿರೋಧಿಸುತ್ತಿರುವ ಜಾತಿವಾದಿ ಲಿಂಗಾಯತರು

೧೨ ನೇ ಶತಮಾನದಲ್ಲಿ ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ “ಅನುಭವ ಮಂಟಪದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಾದ ಮನುಸಿದ್ದಾಂತದ ಹೇರಿಕೆ, ಜಾತಿ ಭೇದ, ಲಿಂಗ ಭೇದ, ಕಂದಾಚಾರ, ಅಂಧಶ್ರೃದ್ದೆ ಅಸಮಾನತೆ ಕುರಿತು ಸುದೀರ್ಘ ಚರ್ಚೆಯ ನಂತರ ಬಂದ ನಿರ್ಣಯಗಳೇ ಬಸವಾದಿ ಶರಣರ ವಚನಗಳು (ಶಾಸನಗಳು) ಇವುಗಳು ಜಾತಿ ಭೇದವಿಲ್ಲದ, ವರ್ಗ ಭೇದವಿಲ್ಲದ ಮತ್ತು ಲಿಂಗಭೇದವಿಲ್ಲದ ಒಂದು ಸಮ ಸಮಾಜದ ಪರ್ಯಾಯ ಪ್ರಜಾಸತ್ತಾತ್ಮಕ ಮೌಲ್ಯಗಳುಳ್ಳ ವಚನ ಧರ್ಮ ನಿರ್ಮಾಣವೇ ಎಲ್ಲ ವಚನಕಾರರ ಗುರಿಯಾಗಿತ್ತು.

ಬಸವಣ್ಣನವರು ಪ್ರಾರಂಭಿಸಿದ ಚಳುವಳಿಯು ಅಂದಿನ ಸಮಾಜದ ದುಡಿಯುವ ವರ್ಗದವರಲ್ಲಿ, ಮಹಿಳೆಯರಲ್ಲಿ, ಅಸ್ಪೃಶ್ಯರಲ್ಲಿ ಕ್ರಾಂತಿಕಾರಕ ಬದಲಾವಣೆ ಹುಟ್ಟಿ ಹಾಕಿತು.
ಸರ್ವರಿಗೂ ಸಮಪಾಲು ಸಮಬಾಳು ನೀಡುವ ಮೂಲಕ ಶರಣರು ಕಲ್ಯಾಣ ರಾಜ್ಯವನ್ನು ಕಟ್ಟಿದರು. ಇದನ್ನು ಸಹಿಸದ ಜಾತಿವಾದಿಗಳು, ಮತಾಂಧರು, ಯಥಾಸ್ಥಿತಿವಾದಿಗಳು ಶರಣರ ಆಶಯಗಳಿಗೆ ಕೊಡಲಿ ಪೆಟ್ಟು ಕೊಟ್ಟರು. ಬಸವಾದಿ ಶರಣರ ಉದಾತ್ ವಿಚಾರಗಳು ಅಂತರಗಂಗೆಯಾಗಿ ಹರಿಯುತ್ತಾ ‌ಮೈಸೂರು ರಾಜಸತ್ತೆಯನ್ನು ಸಹ ಪ್ರೇರೇಪಿಸಿತು.

ಪ್ರಜಾಪ್ರಭುತ್ವ ಆಡಳಿತಕ್ಕಾಗಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯ ಅವರು ಬ್ರಾಹ್ಮಣ್ಯೇತರ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗೆ ೧೯೧೮ ರಲ್ಲಿ ರಚಿತವಾದ ಸಮಿತಿ “ಲೆಸ್ಲಿ ಮಿಲ್ಲರ್ ಸಮಿತಿ” ಈ ಸಮಿತಿಯ ರಚಸಿದರು. ಮಿಲ್ಲರ್ ಆಯೋಗದ ವರದಿಯ ಅನುಷ್ಟಾನವನ್ನು ಅಂದಿನ ದಿವಾನರಾಗಿದ್ದ ಮೊಕ್ಷ ಗುಂಡಂ ವೀಶ್ವೇಶ್ವರಯ್ಯನವರು ವಿರೋಧಿಸಿ ದಿವಾನ ಹುದ್ದೆಗೆ ರಾಜಿನಾಮೆ ನೀಡಿದರು.
ಇದೇ ರೀತಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ೧೯೫೩ ರಲ್ಲಿ ಕಾಕ ರ್ಕಾಲೇಕರ್ ಸಮಿತಿ, ೧೯೬೦ ರಲ್ಲಿ ನಾಗನಗೌಡ ಆಯೋಗ, ೧೯೮೪ ರಲ್ಲಿ ಪಿ. ವೆಂಕಟಸ್ವಾಮಿ ಆಯೋಗ ಮತ್ತು ೧೯೯೩ ರಲ್ಲಿ ಚಿನ್ನಪ್ಪ ರೆಡ್ಡಿ ಆಯೋಗಗಳು ಜಾತಿ ಗಣತಿ ಮಾಡಿ ವರದಿ ನೀಡಿದರೂ ಪ್ರಬಲ ಜಾತಿವಾದಿಗಳಾದ ಬ್ರಾಹ್ಮಣರು, ಲಿಂಗಾಯತರು ಮತ್ತು ಒಕ್ಕಲಿಗರು ಇದನ್ನು ವಿರೋಧಿಸಿದವು.

ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಲಿಂಗಾಯತರು, ಜಗತ್ತಿನಲ್ಲಿಯೇ ದುಡಿಯುವ ವರ್ಗದ ಮತ್ತು ಅಸ್ಪೃಶ್ಯರನ್ನು “ಅಪ್ಪನೂ ನಮ್ಮ ಮಾದರ ಚೆನ್ನಯ್ಯ ಬಪ್ಪನೂ ನಮ್ಮ ಡೋಹಾರ ಕಕ್ಕಯ್ಯ” ಎಂದು ಅಪ್ಪಿಕೊಂಡು, ಒಪ್ಪಿಕೊಂಡು ಪರ್ಯಾಯ ಸಮತಾ ಲಿಂಗಾಯತ ಧರ್ಮ ನೀಡಿ ಶಿಕ್ಷಣ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಇಂದ ವಂಚಿತರಾದ ಇವರಿಗೆ ಎಲ್ಲಾ ರೀತಿಯ ಮಾನವೀಯ ಹಕ್ಕುಗಳನ್ನು ನೀಡುವ ಮೂಲಕ ಲಿಂಗಾಯತ ಎಂಬ ಪ್ರಜಾಸತ್ತಾತ್ಮಕ ಧರ್ಮ ನೀಡಿದರು.
೧೨ನೇ ಶತಮಾನದ ನಂತರ ಈ ಚಳುವಳಿ ಮಂಕಾಗಿ ಮತ್ತೆ ಮೂರು ಶತಮಾನದ ನಂತರ ಅಂದರೆ ೧೫ ನೇ ಶತಮಾನದಲ್ಲಿ ವೀರಶೈವ ಹೊದಿಕೆಯಲ್ಲಿ ಲಿಂಗಾಯತ ಎಂಬುದು ಜಾತೀಕರಣಗೊಂಡಿತು.

೧೯೦೪ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಚನೆ ಗೊಂಡು ಜಾತಿ ರಾಜಕಾರಣ ಮಾಡುತ್ತಾ ತನ್ನಲ್ಲಿಯ ಕುಂಬಾರ, ಕಮ್ಮಾರ, ಹಟಗಾರ, ಮಡಿವಾಳ, ಹಡಪದ, ಸಮಗಾರ, ಜಾಡರು, ನಾಯಿಂದ, ಮಾಲಗಾರ, ಹೀಗೆ ಹತ್ತು ಹಲವಾರು ದುಡಿಯುವ ವರ್ಗದವರನ್ನು ಅಪ್ಪಿಕೊಳ್ಳದೇ ಒಪ್ಪಿಕೊಳ್ಳದೇ ದೂರ ಇಡುವ ಮೂಲಕ ಆಧುನಿಕ ಯುಗದ ಲಿಂಗಿ ಬ್ರಾಹ್ಮಣರು ಮತ್ತು ಮನುವಾದಿಳಾಗಿ ವರ್ತಿಸುವ ಹಿನ್ನೆಲೆಯಲ್ಲಿ ಇವರ ಜನಸಂಖ್ಯೆ ೬೬ ಲಕ್ಷಕ್ಕೆ ಬಂದು ನಿಂತಿದೆ.
ಇದನ್ನು ಯೋಚನೆ ಮಾಡದೇ ಇಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಬೊಬ್ಬೆ ಹಾಕುವುದು ಸರಿಯಲ್ಲ, ಇಂದು ಲಿಂಗಾಯತ ಸಮಾಜ ಬಸವಾದಿ ಶರಣರ ತತ್ವದ ಹಾದಿಯಲ್ಲಿ ನಡೆದಿದ್ದೇ ಆದರೆ ಕರ್ನಾಟಕದಲ್ಲಿ ನಿಮ್ಮ ಜನಸಂಖ್ಯೆ ೫ ಕೋಟಿ ಆಗಿರುತ್ತಿತ್ತು.

ಇಂಥ ಸಂದರ್ಭದಲ್ಲಿ ಲಿಂಗಾಯತ ಧರ್ಮಿಯರ ಪ್ರಾತಿನಿಧಿಕ ಸಂಸ್ಥೆ ಯಾದ ಜಾಗತಿಕ ಲಿಂಗಾಯತ ಮಹಾಸಭಾ ಕರ್ನಾಟಕ ಈ ಜನಗಣತಿ ವಿರೋಧ ಮಾಡದೇ ಮೌನವಾಗಿರುವುದು ಒಂದು ಹೆಮ್ಮೆಯ ಲಕ್ಷಣ.ಶತ ಶತಮಾನಗಳಿಂದ ಅಭಿವೃದ್ಧಿ ಇಂದ ವಂಚಿತರಾದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಜಾತಿಗಣತಿ ವಿರೋಧ ಮಾಡದೇ ಬೆಂಬಲಿಸಬೇಕು.

ಇದು ಬಸವಣ್ಣನವರು ನೀಡಿದ ಜೀವ ಪರ, ಜನಪರ ಲಿಂಗಾಯತ ಧರ್ಮೀಯರ ನಿರ್ಧಾರವಾಗ ಬೇಕು ಇಲ್ಲದಿದ್ದರೆ ನಾವು ಬಸವಾದಿ ಶರಣರಿಗೆ ಮಾಡಿದ ದ್ರೋಹ ವಾಗುತ್ತದೆ.

~ ಶ್ರೀಶೈಲ. ಜಿ. ಮಸೂತೆ

ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ˌ ಬೆಂಗಳೂರು.

ಸೂಚನೆ : ಓದುಗರು ತಮ್ಮ ಅಭಿಪ್ರಾಯಗಳನ್ನು ಬರೆದು ಕಳಿಸಬಹುದು. ಅವರ ಅಭಿಪ್ರಾಯಕ್ಕೆ ಅವರೆ ಹೊಣೆ

Related Articles

Leave a Reply

Your email address will not be published. Required fields are marked *

Back to top button