
ಹುರಸಗುಂಡಗಿ : ೫: ಮಹಾತ್ಮ ಬುದ್ದನ ಶಾಂತಿ, ಬಸವಣ್ಣನವರ ಕ್ರಾಂತಿ ಮತ್ತು ಡಾ.ಬಾಬಾಸಾಹೇಬರ ಜ್ಞಾನ ವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕೊಡ್ಲಾ ಉರಿಲಿಂಗ ಮಠದ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ನುಡಿದರು.
ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಅವರು ಪ್ರತಿಮೆಯಲ್ಲಿ ಇಲ್ಲ. ಪ್ರತಿಮೆ ನಮಗೆ ಸ್ಪೂರ್ತಿ ಕೊಡಬಹುದು. ಆದರೆ ಬಾಬಾ ಸಾಹೇಬರಿಗೆ ನಾವೆಲ್ಲ ಶಿಕ್ಷಣವನ್ನು ಹೊಂದಿದಾಗ ಮಾತ್ರ ಖುಷಿಯಾಗುತ್ತದೆ. ಡಿ.ಜೆ. ಸಪ್ಪಳದಲ್ಲಿ ಪಾನಮತ್ತರಾಗಿ ಜಯಂತೋತ್ಸವ ಆಚರಿಸುವುದು ಸರಿಯಲ್ಲ. ಪ್ರತಿ ಗುಡಿಸಲಿನಲ್ಲೂ ಶಿಕ್ಷಣ ಪಡೆದ ಮಕ್ಕಳು ಹುಟ್ಡಬೇಕು. ಅವರೆಲ್ಲ ದೇಶ ಕೊಡ ಮಾಡುವ ನಾನಾ ಹುದ್ದೆಗಳನ್ನು ಅಲಂಕರಿಸಿದಾಗಲೆ ಬಾಬಾ ಸಾಹೇಬರಿಗೆ ನೆಮ್ಮದಿ ಎಂದು ಮಾರ್ಮಿಕವಾಗಿ ನುಡಿದರು.

ಮುಂದುವರೆದು ಮಾತನಾಡಿದ ಅವರು, ಇಡೀ ಭಾರತದ ಜನರಿಗಾಗಿ ತನ್ನ ಖಾಸಗಿ ಜೀವನವನ್ನು ಕಡೆಗಣಿಸಿ ತನ್ನವರಿಗಾಗಿಯೆ ಜೀವತೇದ ಅಂಬೇಡ್ಕರ್ ಅವರಿಗೆ ನಾವು ಕೊಡುವ ಕಾಣಿಕೆ ಅಂದರೆ ಮೌಢ್ಯ ಕಂದಾಚಾರ ಮುಕ್ತ ಜೀವನ ಎಂದು ಬಣ್ಣಿಸಿದರು.
https://youtu.be/aS8irJvmVKg?si=dEV_YcNkzk0lflnq
ಬುದ್ದ ಬಸವ ಅಂಬೇಡ್ಕರ್ ಅವರು ಬೇರೆ ಬೇರೆ ಅಲ್ಲ. ಮೂರು ಜನರಲ್ಲಿ ಯಾರಾದರೊಬ್ಬರನ್ನು ಅರ್ಥ ಮಾಡಿಕೊಂಡರೆ ಸಾಕು ಸದ್ದಿಲ್ಲದೆ ನಮ್ಮೊಳಗೆ ಎಲ್ಲರೂ ಸೇರಿಕೊಳ್ಳುತ್ತಾರೆ ಎಂದು ಚಿಂತಕ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಹೇಗಾದರೂ ಸೈ ಬುದ್ದ ಬಸವ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಯುವ ಜನತೆಗೆ ತಲುಪಬಾರದೆಂಬ ಉದ್ದೇಶ ಹೊಂದಿರುವ ರಾಜಕಾರಣಿಗಳು ಮತ್ತೆ ಮನುವಾದವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಬರುಬರುತ್ತ ಡಾ.ಬಾಬಾ ಸಾಹೇಬರ ಗುಡಿಕಟ್ಟಿ,ಮೂರ್ತಿ ಪೂಜೆಯನ್ನೂ ಅವರು ಆರಂಭಿಸುತ್ತಾರೆ ಈ ಬಗ್ಗೆ ಯುವಕರು ಎಚ್ಚರಗೊಳ್ಳಬೇಕೆಂದು ಕರೆ ನೀಡಿದರು.
ಬಾಬಾ ಸಾಹೇಬ ಅಂಬೇಡ್ಕರ್ ಅವರ ಪತ್ನಿ ಶ್ರೀಮತಿ ರಮಾಬಾಯಿ ತಾಯಿಯವರು ಅವರ ಬೆನ್ನ ಹಿಂದಿನ ಬೆಳಕಾಗಿ ಶ್ರಮಿಸಿದ್ದಾರೆ.ಮಹಿಳೆಯರಿಗೆ ಹಕ್ಕುಗಳನ್ನು ಒದಗಿಸಿದ್ದಾರೆ. ಹಿಂದೆ ಶಾಸ್ತ್ರ ಸಂಪ್ರದಾಯಗಳ ಹೆಸರಿನ ಮೇಲೆ ಶೋಷಣೆ ಮಾಡಿಕೊಂಡಿದ್ದರು. ಸಂವಿಧಾನ ಜಾರಿಯಾಗಿದ್ದರಿಂದಲೆ ಎಲ್ಲರೂ ಉಸಿರಾಡಲು ಸಾಧ್ಯವಾಗಿದೆ ಎಂದು ವಕೀಲೆ ಅಶ್ವಿನಿ ಮದನಕರ ಸಭೆಗೆ ತಿಳಿಸಿದರು.
ವೇದಿಕೆಯ ಮೇಲೆ ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ಶಿವಪುತ್ರ ಜವಳಿ,ಮುದ್ನಾಳ, ನಾಗಣ್ಣ ಬಡಿಗೇರ, ಶ್ರೀ ಶೈಲ ಹೊಸ್ಮನಿ ಹಾಗೂ ಸಾಕಷ್ಟು ಜನ ಸಂಘಟನೆಯ ಮುಖಂಡರು,ಪ್ರಮುಖರು ಇದ್ದರು.