
ಕಣ್ಣಾನೂರು ಶಾಸನ:
ಬಸವಣ್ಣನವರ ಉಲ್ಲೇಖವಿರುವ ಸಂಶೋಧನೆಯಲ್ಲಿ ಲಭ್ಯವಾಗಿರುವ ಅತ್ಯಂತ ಪುರಾತನ ಶಾಸನ. ಹೊಯ್ಸಳ ಸೋಮೇಶ್ವರನ ಈ ಶಾಸನವು ಸಾಮಾನ್ಯ ಶಕವರ್ಷ 1271. ಈ ಶಾಸನದಲ್ಲಿ ಬಸವಣ್ಣನವರನ್ನು ‘ಕರಸ್ಥಲ ಬಸವದೇವ’ ಎಂದು ಉಲ್ಲೇಖಿಸಲಾಗಿದೆ.
ಬಸವಣ್ಣನವರ ಒಂದು ವಚನದಲ್ಲಿ ‘ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ’ ಎಂದಿರುವುದೂ ಗಮನಾರ್ಹ.
ಹಿರಿಯೂರು ಶಾಸನ:
ಹೊಯ್ಸಳರ ಮೂರನೇ ನರಸಿಂಹನ ಆಳ್ವಿಕೆಯಲ್ಲಿನ ಈ ಶಾಸನದ ಕಾಲ ಸಾ.ಶ.1258-59. ಈ ಶಾಸನದ ಐದರಿಂದ ಏಳನೆಯ ಸಾಲುಗಳಲ್ಲಿ ‘ಸಿರಿಯಾಳ್ವಂ ಬಸವಯ್ಯನೊಳೊಸೆವ…ಮಂ ಬಾಣನುಂ’ ಎಂದು ಉಲ್ಲೇಖಿಸಲಾಗಿದೆ ಬಸವಣ್ಣ ನವರ ಭಕ್ತ ಸಿರಿಯಾಳ, ಬಾಣರಂಥ ಶಿವಶರಣರ ಜೊತೆ ಹೆಸರಿಸಲಾಗಿದೆ.
ಅರ್ಜುನವಾಡ ಶಾಸನ:
ಸೇವುಣರ ರಾಜ ಕನ್ನರನ ಅವಧಿಯ ಈ ಶಾಸನದ ಕಾಲ ಸಾ.ಶ 1260. ಈ ಶಾಸನದಲ್ಲಿ ಉಲ್ಲೇಖಿಸಿರುವ ಈ ವಾಕ್ಯಗಳನ್ನು ಗಮನಿಸಿ:
‘ಮಂಗಳಕೀರ್ತಿ ಪುರಾತನ
ಜಂಗಮ ಲಿಂಗೈಕ ಭಕ್ತಿ ನಿರ್ಬ್ಬರ ಲೀಲಾ
ಸಂಗಂ ಸಂಗನಬಸವಂ
ಸಂಗತಿಯಂ ಮಾಲ್ಕೆ ಭಕ್ತಿಯೊಳು(ಳ) ಗನವರತಂ’
ಇಲ್ಲಿ ಬಸವಣ್ಣನವರನ್ನು ‘ಸಂಗನ ಬಸವ’ ಎಂದು ಕರೆಯಲಾಯಿತು ಬಸವಣ್ಣನವರು ಕೂಡಲಸಂಗಮನ ಅನವರತ ಭಕ್ತರಾಗಿ ತಮ್ಮ ವಚನಗಳಲ್ಲಿ ಅಂಕಿತವಾಗಿಸಿಕೊಂಡಿರುವುದು ಸ್ಮರಣಾರ್ಹ.
ಮುಂದುವರಿದು ಈ ಶಾಸನವು ಬಸವಣ್ಣ ನವರನ್ನು ‘ಬಸವರಾಜ’ ಎಂದು ಕರೆದು ಅವರಿಗೊಬ್ಬ ‘ದೇವರಾಜ’ ಎಂಬ ಹೆಸರಿನ ಅಣ್ಣನೂ ಇದ್ದ ವಿಷಯ ಸಹ ಉಲ್ಲೇಖಿಸುತ್ತದೆ. ಈ ಶಾಸನದಿಂದ ನಮಗೆ ಬಸವಣ್ಣನವರು ತರ್ದವಾಡಿ (ಇಂದಿನ ಬಿಜಾಪುರ ಅಥವಾ ವಿಜಯಪುರ ಜಿಲ್ಲೆ ಪ್ರದೇಶ) ಯಲ್ಲಿನ ‘ಬಾಗವಾಡಿ’ (ಇಂದಿನ ಬಾಗೇವಾಡಿ) ಅಥವಾ ಬಸವನ ಬಾಗೇವಾಡಿ) ಪಟ್ಟಣದ ‘ಪುರವರಾಧೀಶ್ವರ’ (ಊರ ರಾಜ) ಮಾದಿರಾಜರ ಎರಡನೆಯ ಮಗನಾಗಿದ್ದರೆ ಬಸವಣ್ಣನವರ ‘ಅಗ್ರಜ’ ಎಂದರೆ ಅಣ್ಣನ ಹೆಸರು ದೇವರಾಜ ಎಂದು ಉಲ್ಲೇಖಿಸಿ ನಂತರ ದೇವರಾಜನ ವಂಶಾವಳಿಯನ್ನು ನೀಡಿದರು.
ಬಸವಣ್ಣನವರ ತಾಯಿ ಮಾದಲಾಂಬಿಕೆಯವರಾಗಿದ್ದರೆ ಇಂಗುಳೇಶ್ವರವು ಬಾಗೇವಾಡಿಗೆ ಹತ್ತಿರದವರು. ಇದಲ್ಲದೆ ಬಸವಣ್ಣನವರಿಗೆ ಅಕ್ಕನಾಗಮ್ಮ ಎಂಬ ಒಬ್ಬ ತಂಗಿಯೂ ಇದ್ದು ಅವರು ಬಹುಜನರು ತಿಳಿದಿರುವಂತೆ ಬಸವಣ್ಣನವರ ಅಕ್ಕ ಅಲ್ಲ ಆದರೆ ಅವರ ತಂಗಿ. ಕಾರಣ ಅಕ್ಕನಾಗಮ್ಮನವರನ್ನು ಬಸವಣ್ಣನವರ ‘ಅನುಜೆ’ (ತಂಗಿ) ಎಂದೆಂದಿಗೂ ಪೂರ್ವದ ಕೃತಿಗಳಲ್ಲಿ ದಾಖಲಿಸಲಾಗಿದೆ ಆಕೆ ಬಸವಣ್ಣನವರ ‘ಅಗ್ರಜೆ’ (ಅಕ್ಕ) ಅಲ್ಲ ಬದಲಾಗಿ ಎಂದು ಗೊತ್ತಾಗುತ್ತದೆ.
ಚೌಡದಾನಪುರ ಶಾಸನ:
ಸೇವುಣರ ರಾಜ ಮಹಾದೇವನ ಈ ಶಾಸನದ ಕಾಲ ಸಾ.ಶ 1261. ಇಲ್ಲಿ ಬಸವಣ್ಣನವರನ್ನು ಸಂಗಮೇಶನ (ಶಿವ) ಮಗ ‘ಬಸವಯ್ಯ’ ಎಂದು ಉಲ್ಲೇಖಿಸಲಾಗಿದೆ.
ಮರಡಿಪುರ ಶಾಸನ:
ಸಾ.ಶ 1280 ರ ಈ ಶಾಸನದಲ್ಲಿ ಬಸವಣ್ಣನವರನ್ನು ‘ಸಂಗನ ಬಸವಯ್ಯ’ ಎಂದು ಕರೆಯುವುದರ ಜೊತೆಗೆ ಇತರ ಶಿವಶರಣರಾದ ಸಿರಿಯಾಳ, ದಾಸಿಮಯ್ಯ ಮುಂತಾದವರ ಉಲ್ಲೇಖವೂ ಇದೆ.
ಕಲ್ಲೇದೇವರಪುರ ಶಾಸನ:
ಸಾ.ಶ1280 ರ ಕಾಲದ ಈ ಶಾಸನವು ಸೇನರ ರಾಜ ರಾಮಚಂದ್ರನ ಅವಧಿಯಲ್ಲಿ ಹಾಕಿಸಿದ್ದು. ಇಲ್ಲಿ ಬಸವಣ್ಣನವರನ್ನು ‘ಬಸವರಾಜ’ ಎಂದು ಕರೆಯುವುದು ನಂಬಿಯಣ್ಣನೇ ಮೊದಲಾದ ಇತರ ಶಿವಶರಣರ ದಾಖಲೆಯೂ ಇದೆ.
ಸೊರಟೂರ ಶಾಸನ:
ಈ ಶಾಸನವು ಸಾ.ಶ ೧೩೫೬ ರ ಕಾಲಕ್ಕೆ ಇದ್ದು ಬಸವಣ್ಣನವರನ್ನು ‘ಬಸವೇಶ್ವರ’ ಎಂದು ಕರೆಯಲಾಗಿದೆ.
ಗುಡಿಹಾಳ-ಕುಂಟೋಜಿ ಶಾಸನ:
ಸುಮಾರು ೧೪ನೆಯ ಶತಮಾನಕ್ಕೆ ಸೇರಿದ ಈ ಶಾಸನದಲ್ಲಿ ಬಸವಣ್ಣನವರನ್ನು ‘ಸಂಗಮನಾಥ ಬಸವರಾಜದೇವ’ ಎಂದು ದಾಖಲಿಸಲಾಗಿದೆ.
ನಾಗಲೋಟಿ ಶಾಸನ:
ಹಂಪಿಯ ವಿಜಯನಗರ ಸಾಮ್ರಾಜ್ಯದ ಅಳಿಯ ರಾಮರಾಯನ ಆಳ್ವಿಕೆಯಲ್ಲಿ ಹಾಕಿಸಿದ ಈ ಶಾಸನದ ಕಾಲ ಸಾ.ಶ 1624. ಇದರಲ್ಲಿ ಬಸವಣ್ಣನವರನ್ನು ‘ಕಲ್ಯಾಣ ಬಸವೇಶ್ವರ’ ಎಂದು ಕರೆದಿದ್ದು ಇಲ್ಲಿ ಬರುವ ಕಲ್ಯಾಣದ ಉಲ್ಲೇಖ ನಿಸ್ಸಂಶಯವಾಗಿ ಇಂದಿನ ಬಸವಕಲ್ಯಾಣವೇ ಆಗಿದೆ.
ಜೋಡಿದಾಸೇನಹಳ್ಳಿ ಶಾಸನ:
ಸಾ.ಶ 1686ರ ಕಾಲದ ಈ ಶಾಸನದಲ್ಲಿ ಬಸವಣ್ಣನವರನ್ನು ‘ಸಂಗನ ಬಸವರಾಜೇಂದ್ರ’ ಎಂದು ಕರೆಯಲಾಗಿದೆ. ಕಾನಕಾನಹಳ್ಳಿ ಶಾಸನಗಳು:
ಸಾಮಾನ್ಯ ಶಕ 1700ರ ಕಾಲದ ಈ ತಾಮ್ರಪಟ ಶಾಸನಗಳಲ್ಲಿ ಬಸವಣ್ಣನವರನ್ನು ‘ಕಲ್ಯಾಣ ಪಟ್ಟಣದ ಬಸವೇಶ್ವರ ಸ್ವಾಮಿ’ ಮತ್ತು ‘ಕಲ್ಯಾಣದ ಬಸವಪ್ಪನವರು’ ಎಂದು ನಮೂದಿಸಲಾಗಿದೆ. ಹೀಗೆ ಇಂತಹ ಅನೇಕ ಶಾಸನಗಳು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಬಸವಣ್ಣನವರು ಒಬ್ಬ ಇತಿಹಾಸ ಪುರುಷರು ಎಂದು ಸಾಬೀತುಪಡಿಸುತ್ತಾರೆ. ಈ ಎಲ್ಲ ಶಾಸನಗಳನ್ನು ಕಾಲಾನುಕ್ರಮವಾಗಿ ಅಧ್ಯಯನ ಮಾಡಿದಾಗ ತಿಳಿಯುವುದೇನೆಂದರೆ ಬಸವಣ್ಣನವರು ಜನರ ದೃಷ್ಟಿಯಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ದೇವನ ಸ್ಥಾನಕ್ಕೇರಿದ ಸೋಜಿಗ. ಅದು ಒಂದರ್ಥದಲ್ಲಿ ಬಸವಣ್ಣನವರು ಜನ ಮಾನಸವನ್ನು ಪ್ರಭಾವಿಸಿದ ರೀತಿಯ ಮತ್ತು ಅವರು ಸರ್ವಸಮಾನತೆಯ ಸಮಾಜದ ನಿರ್ಮಾಣದ ರೂವಾರಿಯಾಗಿ ಅನುಭವ ನಿರ್ಮಾಣದ ರೂವಾರಿಯಾಗಿ ಅನುಭವ ಮಂಟಪವೆಂಬ ಮಂದಿರದಲ್ಲಿ ಸಾಧಿಸಿದ ಸಾಧನೆಗಳ ಭಾವುಕ ವಿಕಸನದಂತಿದೆ.ಅಂಥ ಐತಿಹಾಸಿಕ ಪುರುಷ, ‘ಯುಗದ ಉತ್ಸಾಹ’ ಎಂದು ಸ್ವಯಂ ಅಲ್ಲಮಪ್ರಭುಗಳಿಂದ ಬಣ್ಣಿಸಿದ ಬಸವಣ್ಣನವರ ಈ ಜಯಂತಿಯು ಮನುಷ್ಯ ಸಮಾನತೆಯ, ಸಚ್ಚಾರಿತ್ರ್ಯದ ಸಮಾಜದ ನಿರ್ಮಾಣದೆಡೆ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಗೊಳಿಸಲಿ.
O ಬಸವರಾಜ ಕುರಗೋಡ