ಮೇಲ್ಮನೆಯಲ್ಲಿ ಛಾಪು ಮೂಡಿಸಬಲ್ಲ ಅಮೀನಮಟ್ಟು, ಡಿ.ಜಿ.ಸಾಗರ
ತನ್ನ ಹಿರಿಮೆ ಹೆಚ್ಚಿಸಿಕೊಂಡ ಸಿದ್ದರಾಮಯ್ಯ ಸರಕಾರ

ಸರಿಯಾಗಿ ಹತ್ತು ವರ್ಷಗಳ ಹಿಂದೆ ಶ್ರೀ ದಿನೇಶ್ ಅಮೀನಮಟ್ಟು ಅವರು ಸತ್ಯಂಪೇಟೆಯಲ್ಲಿ ಏರ್ಪಡಿಸಿದ್ದ ಬಸವವಾದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದರು.
ಹಾಗೆ ನೋಡಿದರೆ ಶ್ರೀ ಅಮೀನಮಟ್ಟು ಹಾಗೂ ನನಗೂ ಸಂಬಂಧವಿಲ್ಲ.ಅವರು ದ.ಕ.ದವರು ನಾನು ಕಲ್ಯಾಣ ಕರ್ನಾಟಕದವನು. ಆದರೆ ಒಂದೆ ಹೂವಿನ ಬಳ್ಳಿಯಂತೆ, ವಿಚಾರದ ದೃಷ್ಟಿಯಿಂದ ಒಂದಾಗಿದ್ದವರು. ಅಮೀನಮಟ್ಟು ಅವರಿಗೆ ಇರುವ ಜನಪರವಾದ ನಿಲುವುಗಳು, ವೈಚಾರಿಕ ಸ್ಪಷ್ಟತೆ, ಸರಳವಾದ ಬರವಣಿಗೆ ನನ್ನನ್ನು ಸೆಳೆದಿವೆ.
ಪ್ರಜಾವಾಣಿ ಪತ್ರಿಕೆಯಲ್ಲಿ ಸ್ವಾಮೀ ವಿವೇಕಾನಂದರ ಕುರಿತು ಬರೆದ ಬರವಣಿಗೆ ಯಥಾಸ್ಥಿತಿವಾದಿಗಳಲ್ಲಿ ನಡುಕ ಹುಟ್ಟಿಸಿತ್ತು. ಸಿದ್ಧರಾಮಯ್ಯ ಅವರ ರಾಜಕೀಯ ಸಲಹೆಗಾರರಾಗಿರುವಾಗಲೂ ಅದೆ ಹಿಂದಿನ ಅಮೀನಮಟ್ಟು ಆಗಿದ್ದರು. ಸ್ಥಾನಮಾನಗಳನ್ನು ತಲೆಗೆ ಏರಿಸಿಕೊಳ್ಳದೆ. ಆಮೂಲಕ ಏನನ್ನೋ ಪಡಕೊಳ್ಳುವ ,ಹೊಡಕೊಳ್ಳುವ ಜಾಯಮಾನ ಇವರದಲ್ಲ.
ಇಂಥವರು ಮೇಲ್ಮನೆಯಲ್ಲಿ ಇರುವುದು ಜನ ಸಾಮಾನ್ಯನ ಪ್ರತಿನಿಧಿಯಾಗಿ .ಇನ್ನು ಮುಂದೆ ಹಿರಿಯರ ಸಭೆಯಲ್ಲಿ ಅರ್ಥ ಪೂರ್ಣ ಮಾತುಗಳಿಗೆ ಶ್ರೀ. ದಿನೇಶ ಅಮೀನಮಟ್ಟು ಹಾಗೂ ಶ್ರೀ.ಡಿ.ಜಿ.ಸಾಗರ ಧ್ವನಿಯಾಗಲಿದ್ದಾರೆ.
ಕಲಬುರ್ಗಿಯ ಡಿ.ಜಿ.ಸಾಗರ ನೊಂದವರ ದನಿ. ಶೋಷಿತರ ಪರವಾದ ಹೋರಾಟಕ್ಕೆ ಸದಾ ಸಿದ್ಧ. ಮೊನಚಾದ ಮಾತುಗಳು, ಅಂತಃರಕಣದ ಹೃದಯ ಅದು ಡಾ.ಬಾಬಾ ಸಾಹೇಬರ ಕೊಡುಗೆ. ತಳ ಸಮೂಹದಲ್ಲಿ ಸದಾ ಕಾವು ಹುಟ್ಟಿಸುತ್ತ, ಶಿಕ್ಷಣದ ಕಡೆ ಒತ್ತು ಕೊಡಲು ವಿನಂತಿಸುವ ಕಳಕಳಿ ಇವರಲ್ಲಿ. ಬುದ್ದ ಬಸವ ಅಂಬೇಡ್ಕರ್ ಅವರ ತತ್ವಗಳು ಗೆಲ್ಲಲಿ ವೈದಿಕತ್ವದ ತಂತ್ರ ಕುತಂತ್ರಗಳು ಸೋಲಲಿ ಎಂಬುದು ಸಾಗರ ಅವರ ಹಂಬಲ.
ಸಿದ್ಧರಾಮಯ್ಯ ಸರಕಾರ ಯೋಗ್ಯರನ್ನು ಮೇಲ್ಮನೆಗೆ ಕಳಿಸುವ ಮೂಲಕ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ.
೦ ವಿಶ್ವಾರಾಧ್ಯ ಸತ್ಯಂಪೇಟೆ