
Dwarakanath Chokka ಅಣ್ಣ,
ಸ್ವತಃ ಗಣತಿ ಸಂದರ್ಭದಲ್ಲಿ ನಾನೇ ಎದುರಿಸಿದ ಸಂದರ್ಭದ ಒಂದು ಉದಾಹರಣೆ ಇದು.
ನಾನು ಸಮೀಕ್ಷೆ ಮಾಡುತ್ತಿದ್ದ ಏರಿಯಾದಲ್ಲಿ ಒಂದು ಕುಟುಂಬ, ಜಾತಿ ಹೆಸರು ಕೇಳುತ್ತಿದ್ದಂತೆಯೇ ನಾವು 3ಬಿ, ಲಿಂಗಾಯತ ಎಂದು ಹೇಳಿದರು. ತಕ್ಷಣವೇ ಇದು ಪರಿಶಿಷ್ಟ ಜಾತಿ ಸಮೀಕ್ಷೆಯೇ ಎಂದು ಪುನಃ ಪ್ರಶ್ನಿಸಿದರು, ನಾನು ಹೌದೆಂದೆ. ಆಗ ನಾವು ಜಂಗಮರು 19.1 ಕಾಲಂ ನಲ್ಲಿ ಬೇಡ ಜಂಗಮರು ಹೆಸರು ಇದೆಯಂತೆ ನೋಡಿ, ಪರಿಶಿಷ್ಟ ಜಾತಿ ಸಮೀಕ್ಷೆಗೆ ನಮ್ಮ ಕುಟುಂಬದ ಸಮೀಕ್ಷೆ ಮಾಡಿ ಎಂದರು! ನಾನು ನೀವು ಈಗಷ್ಟೇ 3ಬಿ, ಲಿಂಗಾಯತರು ಎಂದು ಹೇಳಿದಿರಲ್ಲ ಎಂದು ಮರುಪ್ರಶ್ನಿಸಿದಾಗ ನಮ್ಮವರೆಲ್ಲಾ SC ಬೇಡ ಜಂಗಮ ಅಂತ ಗಣತಿ ಮಾಡಿಸಿ ಎಂದಿದ್ದಾರೆ ಹಾಗಾಗಿ ಸಮೀಕ್ಷೆ ಮಾಡಿಕೊಳ್ಳಿ ಎಂದರು. ನಾನು ಇದು ತಪ್ಪಲ್ಲವೇ, ಸ್ವತಃ ನೀವೇ 3ಬಿ ಎಂದಿರಿ, ಪ್ರಮಾಣ ಪತ್ರ ಕೂಡ ಇದೆ ಎಂದಿರಿ, ಈಗ ಪರಿಶಿಷ್ಟ ಜಾತಿ ಸಮೀಕ್ಷೆ ಮಾಡಿ ಅಂತ ಹೇಳ್ತಿದ್ದೀರಿ ಎಂದಾಗ, ಅದಾರಿಗೋ ಫೋನ್ ಮಾಡಿ ಕೇಳಿಕೊಂಡರು, ಲೌಡ್ ಸ್ಪೀಕರ್ ಆನ್ ಆಗಿತ್ತು, ನನಗೂ ಧ್ವನಿ ಚೆನ್ನಾಗಿ ಕೇಳಿಸಿತು. ಆ ಕಡೆಯಿಂದ “19.1 ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬೇಡ ಜಂಗಮ ಅಂತ ಇದೆ, ಅದನ್ನೇ ನಮೂದಿಸಿ ಗಣತಿ ಮಾಡಿಸಿ” ಎಂದರು. ಫೋನ್ ಕರೆ ಕಟ್ಟಾಗುತ್ತಿದ್ದಂತೆ ನಾವು SC ಪ್ರಮಾಣ ಪತ್ರ ಮುಂದಿನ ತಿಂಗಳು ಮಾಡಿಸ್ತೀವಿ ಗಣತಿ ಮಾಡಿ ಸರ್ ಎಂದರು. ನಾನು ನಮಗೆ ನಿಯೋಜಿಸಿದ್ದ ಮೇಲಧಿಕಾರಿ RI ಗೆ ಫೋನಾಯಿಸಿ ವಿಷಯ ಮುಟ್ಟಿಸಿದೆ, ಆಗ ಅವರು ಹೇಳುತ್ತಿರುವ ಜಾತಿ ಹೆಸರು ಪಟ್ಟಿಯಲ್ಲಿ ಇದ್ದರೆ ಆ ಕುಟುಂಬದ ಸಮೀಕ್ಷೆ ಮಾಡಬೇಕಾಗುತ್ತದೆ, ಮಾಡಿ ಸರ್ ಎಂದು ಆಜ್ಞೆಯಿತ್ತರು. ನಾನು ತೀರಾ ಅಸಹಾಯಕನಾಗಿ ಪರಿಶಿಷ್ಟರಲ್ಲದ ಅವರನ್ನು ಸಮೀಕ್ಷೆ ಮಾಡಿ ಬಂದೆ!
ಆ ದಿನ ಈ ಘಟನೆಯಿಂದ ತುಂಬಾ ವಿಚಲಿತನಾದೆ, ನನ್ನ ಸ್ನೇಹಿತರಿಗೆಲ್ಲಾ ವಿಷಯ ತಿಳಿಸಿ ಸುಮ್ಮನಾದೆ. ಅರ್ಹರಲ್ಲದವರು ಪರಿಶಿಷ್ಟರ ಮೀಸಲಾತಿಗಾಗಿ ಸುಳ್ಳು ಹೇಳಿಕೊಂಡು ಒಳನುಸುಳುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ತೂತು ಮಡಿಕೆಯ ನೀರಿನಂತಾಗಿರುವ ಮೀಸಲಾತಿ ದಲಿತರ ಪಾಲಿಗೆ ಇನ್ನಷ್ಟು ಮರೀಚಿಕೆಯಾಗುವುದು ಖಚಿತ ಅನ್ನಿಸಿತು.
ದ್ವಾರಕನಾಥ್ ಅಣ್ಣ, ನಿಮ್ಮಂತಹ ಹಿರಿಯರು ಈ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಸಮೀಕ್ಷೆಯಲ್ಲಿ ಬೇಡ ಜಂಗಮರು ಎಂದು ಸಮೀಕ್ಷೆಗೆ ಒಳಗಾಗಿರುವ ಕುಟುಂಬಗಳ ಮರು ಪರಿಶೀಲನೆ ಮಾಡಿ ನೈಜತೆ ಆಧರಿಸಿ ಅವರು ಪರಿಶಿಷ್ಟರು (Based of criterias) ಅಥವಾ ಪರಿಶಿಷ್ಟರಲ್ಲ ಎಂಬ ತೀರ್ಮಾನಕ್ಕೆ ಬರಬೇಕು. ಈ ಮೂಲಕ ಪರಿಶಿಷ್ಟರ ಮೀಸಲಾತಿಯ ದುರ್ಬಳಕೆ ತಪ್ಪಿಸಿ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ನಿಮ್ಮಿಂದ ಪ್ರಯತ್ನಗಳಾಗಲಿ ಎಂದು ನಾವು ನಿರೀಕ್ಷಿಸುತ್ತೇವೆ.
– ಅಪ್ಪಗೆರೆ ಡಿ ಟಿ ಲಂಕೇಶ್