
ಕನ್ನಡಕ್ಕೆ ಕಾವ್ಯದ ಆನಂದ ನೀಡಿದ ಕವಿ
ಡಾ. ಸಿದ್ದಯ್ಯ ಪುರಾಣಿಕರು
**************************
” ಏನಾದರೂ ಆಗು ಮೊದಲು ಮಾನವನಾಗು” ಎಂಬ ಸಂದೇಶ ನೀಡಿದ ಕನ್ನಡದ ಖ್ಯಾತ ಕವಿ, ಆಧುನಿಕ ವಚನಕಾರ ಡಾ. ಸಿದ್ದಯ್ಯ ಪುರಾಣಿಕ ಅವರು ‘ಕಾವ್ಯಾನಂದ’ ಎಂಬ ಕಾವ್ಯನಾಮದಿಂದಲೇ ಕನ್ನಡ ಓದುಗರಿಗೆ ಪರಿಚಿತರು. ೧೯೧೮ ಜೂನ್ ೧೮ ರಂದು ಕೊಪ್ಪಳ ಜಿಲ್ಲೆಯ ಯಲಬುರಗಿ ತಾಲೂಕಿನ ದ್ಯಾಂಪುರ ಎಂಬ ಹಳ್ಳಿಯಲ್ಲಿ ಜನಿಸಿದ ಅವರ ತಂದೆ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಅವರು ಘನ ವಿದ್ವಾಂಸರು. ತಾಯಿ ಶ್ರೀಮತಿ ದಾನಮ್ಮ. ಈ ದಂಪತಿಗಳ ಐವರು ಮಕ್ಕಳಲ್ಲಿ ಸಿದ್ದಯ್ಯ ಹಿರಿಯವರು.
ಪಾಂಡಿತ್ಯ, ಕಾವ್ಯಪ್ರತಿಭೆ ಪುರಾಣಿಕರಿಗೆ ವಂಶಪಾರಂಪರ್ಯವಾಗಿಯೇ ಬಂದಿದ್ದು. ಅವರ ಅಜ್ಜಚೆನ್ನಕವಿಗಳು ಕವಿರತ್ನ ಎಂದೇ ವಿಖ್ಯಾತರು. ತಂದೆ ಪಂ. ಕಲ್ಲಿನಾಥ ಶಾಸ್ತ್ರಿಗಳು ಕಾವ್ಯ ನಾಟಕ ರಚನೆಗಳಲ್ಲಿ ಸಿದ್ಧಹಸ್ತರು. ಪುರಾಣಿಕರು ಬಾಲ್ಯದಿಂದಲೇ ತಂದೆಯಿಂದ ಎಲ್ಲ ಹಳೆಗನ್ನಡ ನಡುಗನ್ನಡ ಕಾವ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರು. ಇವರ ಸೋದರ ಮಾವ. ಕಾಲಕಾಲೇಶ್ವರ ಶಾಸ್ತ್ರಿಯವರು ಸಹ ದೊಡ್ಡ ವೇದಾಂತಿಗಳು. ಹೀಗೆ ಅವರ ಸುತ್ತಲಿನ ವಾತಾವರಣದ ಪ್ರಭಾವದಿಂದಾಗಿ ಸಿದ್ದಯ್ಯ ಪುರಾಣಿಕರು ಸಹಜವಾಗಿಯೇ ಕಾವ್ಯಸಾಹಿತ್ಯದತ್ತ ಆಕರ್ಷಿತರಾದರು. ಅಧ್ಯಯನದಿಂದ ತಮ್ಮ ಸಾಹಿತ್ಯಶಕ್ತಿ ಬೆಳೆಸಿಕೊಂಡರು.
ಅದರೊಂದಿಗೇ ಅವರು ತಮ್ಮ ವಿದ್ಯಾಭ್ಯಾಸದಲ್ಲೂ ಅಷ್ಟೇ ಆಸಕ್ತಿ ಹೊಂದಿದ್ದರು. ಲೌಕಿಕ ಶಿಕ್ಷಣವನ್ನೂ ಅವರು ಅಲಕ್ಷಿಸಲಿಲ್ಲ. ಬಿ. ಎ. ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಪ್ರಥಮ ಸ್ಥಾನ ಲಭಿಸಿತ್ತು. ಅಚ್ಚರಿಯ ಸಂಗತಿ ಎಂದರೆ ಅವರು ತಾವು ಒಬ್ಬ ತಂತ್ರಜ್ಞರಾಗಬೇಕೆಂದು ಬಯಸಿ ಉನ್ನತ ಗಣಿತ ಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. ಅಕಸ್ಮಾತ್ ಒಂದು ಸನ್ನಿವೇಶ ಅವರನ್ನು ಕನ್ನಡ ವಿಷಯದೆಡೆಗೆ ಕೊಂಡುಹೋಯಿತು. ಅವರ ಗಣಿತ ಶಿಕ್ಷಕರಾದ ರಹಮತ್ತುಲ್ಲಾಖಾನ್ ಅವರು ಒಮ್ಮೆ ಪುರಾಣಿಕರು ಹೋಂ ವರ್ಕ ಮಾಡಿಲ್ಲವೆಂಬ ಕಾರಣಕ್ಕಾಗಿ ನೀನು ಬೇರೆ ವಿಷಯ ತೆಗೆದುಕೋ ಎಂದು ಹೇಳಿದಾಗ ಸ್ವಾಭಿಮಾನಿಗಳಾದ ಪುರಾಣಿಕರು ಕೂಡಲೇ ತಮ್ಮ ಇನ್ನೊಬ್ಬ ಮೆಚ್ಚಿನ ಗುರು ತವಗ ಭೀಮಸೇನರಾಯರ ಬಳಿ ಹೋಗಿ ಕನ್ನಡ ವಿಷಯವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಳ್ಳುವದಾಗಿ ಹೇಳಿ ಅವರ ಶಿಷ್ಯತ್ವ ಸ್ವೀಕರಿಸಿದರು.
ಅವರದು ಹೈದರಾಬಾದ್ ಕರ್ನಾಟಕ ಭಾಗ. ಅಲ್ಲಿ ಉರ್ದುವಿನ ಪ್ರಭಾವ ಜಾಸ್ತಿ. ಆದರೂ ಪುರಾಣಿಕರು ಅಲ್ಲಿ ಕನ್ನಡವನ್ನೇ ಆಯ್ಕೆ ಮಾಡಿಕೊಂಡು ಅದರಲ್ಲೇ ತಮ್ಮ ಶಿಸ್ತಿನ ಅಧ್ಯಯನದಿಂದ ಉನ್ನತ ಶ್ರೇಣಿಯಲ್ಲೇ ಪಾಸಾಗುತ್ತಹೋದರು. ಸಂಗಡ ಸಾಹಿತ್ಯಾಭ್ಯಾಸವೂ ನಡೆದಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ಕಲಬುರಗಿ ಯಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಆಗಿನ ಪ್ರಸಿದ್ಧ ಪತ್ರಿಕೆ ಜಯಕರ್ನಾಟಕದಲ್ಲಿ ಇವರ ಪದ್ಯ ಪ್ರಕಟವಾಯಿತು. ಇವರು ಆಲಮಟ್ಟಿ ಯಲ್ಲಿದ್ದಾಗ ,” ಶರಣ ಸಂದೇಶ” ಎಂಬ ಪತ್ರಿಕೆಯಲ್ಲಿ ಪ್ರಕಟವಾದ ” ಕಾವ್ಯದೇವಿ” ಎಂಬ ನೀಳ್ಗವನದಲ್ಲಿ ಬಂದ ” ನಿನ್ನಾತ್ಮವಾನಂದ, ನನ್ನಾತ್ಮ ಕಾವ್ಯ, ಇಂತೂ ಕಾವ್ಯಾನಂದ, ನಾಮ ಸುಶ್ರಾವ್ಯ ” ಎಂಬ ಸಾಲುಗಳ ಮೂಲಕ ಇವರು ಕಾವ್ಯಾನಂದರಾದರು.
ಯೌವನಕ್ಕೆ ಕಾಲಿಡುತ್ತಿರುವಾಗ ತಂದೆ ಅವರ ವಿವಾಹ ಮಾಡಲು ಮುಂದಾದಾಗ ಏಕೋ ಮನಸ್ಸಿಲ್ಲದೇ ತಂದೆಗೂ ಹೇಳದೆ ಮನೆ ಬಿಟ್ಟು ಹರ್ಡೇಕರ ಮಂಜಪ್ಪ ಅವರ ಆಶ್ರಮಕ್ಕೆ ಹೋಗಿ ಉಳಿದು ಅಲ್ಲಿ ಯೋಗ, ಅಧ್ಯಾತ್ಮಗಳನ್ನು ಕಲಿಯತೊಡಗಿದರಾದರೂ ಅದು ಹೆಚ್ಚು ಕಾಲ ಮುಂದುವರಿಯಲಿಲ್ಲ. ಒಂದು ವಿಚಿತ್ರ ಘಟನೆ ಅವರ ಬದುಕಿನ ದಿಕ್ಕು ಬದಲಿಸಿತು. ಉದಯಗಿರಿಯ ಹಾವಗಿಸ್ವಾಮಿ ಮಠದ ಸ್ವಾಮಿಗಳು ಸಿದ್ದಯ್ಯ ಪುರಾಣಿಕರನ್ನು ತಮ್ಮ ಮಠದ ಉತ್ತರಾಧಿಕಾರಿಯಾಗಿ ಮಾಡಲು ಕಳಿಸುವಂತೆ ಅವರ ತಂದೆಗೆ ಪತ್ರ ಬರೆದಿದ್ದರು. ತಂದೆ ಮಗನಿಗೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವಂತೆ ಹೇಳಿದರು. ಮನೆಯ ಪರಿಸ್ಥಿತಿ ಚೆನ್ನಾಗಿರಲಿಲ್ಲವಾದ್ದರಿಂದ ಸಿದ್ದಯ್ಯ ಪುರಾಣಿಕರು ಕೊನೆಗೆ ತಮ್ಮ ಮೆಚ್ಚಿನ ಯೋಗಿಯೊಬ್ಬರನ್ನು ಕೇಳಿ ನಿರ್ಧರಿಸಲು ಆ ಯೋಗಿಯಿದ್ದ ಗುಹೆಯತ್ತ ತೆರಳಿದಾಗ ಅಲ್ಲಿ ಅವರು ನೋಡಿದ ಭೋಗದ ದೃಶ್ಯ ಅವರ ಮನಸ್ಸನ್ನೇ ಬದಲಿಸಿತು. ಅವರು ಸನ್ಯಾಸಿಯಾಗುವ ವಿಚಾರ ಕೈಬಿಟ್ಟರು.
ಬಿಎ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೇ ಪ್ರಥಮರಾಗಿ ತೇರ್ಗಡೆ ಹೊಂದಿದ ಅವರು ಎಲ್.ಎಲ್.ಬಿ. ಕಲಿಯಲು ಪ್ರಾರಂಭಿಸಿದರು. ಅಷ್ಟರಲ್ಲೇ ಅವರಿಗೆ ೧೯೪೩ ರಲ್ಲಿ ಅವರು ಪಡೆದ ಗುಣಗಳಿಂದಾಗಿ ತಹಶಿಲ್ದಾರ ಹುದ್ದೆಗೆ ಕರೆಬಂತು. ಅಲ್ಲಿಂದ ಅವರು ಮುಂದೆ ಡೆಪ್ಯುಟಿ ಕಲೆಕ್ಟರ್, ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ವಾರ್ತಾ ಇಲಾಖೆ ಅಧಿಕಾರಿ, ಜಿಲ್ಲಾಧಿಕಾರಿ, ಸಾರಿಗೆ ಕಮಿಶನರ್, ಕಾರ್ಮಿಕ ಇಲಾಖೆ ಕಮಿಷನರ್ ಮೊದಲಾದ ಹುದ್ದೆಗಳನ್ನು ನಿರ್ವಹಿಸಿದರು. ನಾಂದೇಡದಿಂದ ಬೆಳಗಾವಿತನಕ ಅವರ ಸರಕಾರಿ ಸೇವೆ ನಡೆಯಿತು. ಎಲ್ಲೆಡೆ ಅವರು ತಮ್ಮ ಕಾರ್ಯದಕ್ಷತೆ, ಪ್ರಾಮಾಣಿಕತೆಗಳಿಂದ ಅಪಾರ ಜನಪ್ರಿಯತೆ ಗಳಿಸಿದರು.
ಅಧಿಕಾರ ಸ್ಥಾನದೊಂದಿಗೇ ಅವರ ಸಾಹಿತ್ಯೋಪಾಸನೆಯೂ ಮುಂದುವರಿದಿತ್ತು. ಎಂದೂ ಅವರು ಅಧಿಕಾರದ ಅಮಲಿಗೊಳಗಾಗದೇ , ಕನ್ನಡವನ್ನು ಮರೆಯದೇ ಕನ್ನಡದ ಕೆಲಸ ಮಾಡುತ್ತಲೇ ಉಳಿದರು. ಹೈದರಾಬಾದ್ ಕರ್ನಾಟಕ ಪ್ರದೇಶದ ಉರ್ದುಮಯ ವಾತಾವರಣದ ನಡುವೆಯೂ ಅವರು ಕನ್ನಡದ ವಾತಾವರಣ ಕಲ್ಪಿಸಲು ಕನ್ನಡ ಕಾರ್ಯಕ್ರಮಗಳನ್ನು ನಡೆಸಿ ಬಿ. ಎಂ. ಶ್ರೀ, ಮಾಸ್ತಿ, ವಿ. ಸೀ. ಮೊದಲಾದವರನ್ನೆಲ್ಲ ಕರೆಸಿದರು. ೧೯೭೬ ರಲ್ಲಿ ಅವರು ನಿವೃತ್ತರಾದರು.
ಸರಕಾರಿ ಸೇವೆಯ ನಡುವೆ ಅವರ ಸಾಹಿತ್ಯ ರಚನೆಯೂ ಸಾಗಿತ್ತು. ಕಾವ್ಯ, ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ, ಕಾದಂಬರಿ, ಕಥೆ, ಅನುವಾದ, ಸಂಪಾದಿತ ಕೃತಿಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಅವರು ಕೃತಿರಚಿಸಿದರು.
ಕಾವ್ಯದಲ್ಲಿ ಹೇಗೋ ಹಾಗೆಯೇ ವಚನ ರಚನೆಯಲ್ಲೂ ಅವರದು ಬಹಳ ದೊಡ್ಡ ಹೆಸರು. ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ಹಾಲ್ದೆನೆ, ಮೊದಲಾದ ಕವನ ಸಂಕಲನಗಳು, ವಚನ ನಂದನ, ವಚನೋದ್ಯಾನ, ವಚನರಾಮ ಅವರ ಆಧುನಿಕ ವಚನಗಳ ಸಂಗ್ರಹಗಳು.
ಸ್ವತಂತ್ರ ಧೀರಸಿದ್ದೇಶ್ವರಾ ಎಂಬ ಅಂಕಿತ ನಾಮದಲ್ಲಿ ಅವರು ಬರೆದ ವಚನಗಳು ತಮ್ಮ ವಿಚಾರವೈಭವದಿಂದ, ಅರ್ಥವೈಶಾಲ್ಯದಿಂದ ಮನ ಸೆಳೆಯುತ್ತವೆ.
ಉದಾಹರಣೆಗೆ-
” ಫಲವಿತ್ತ ರೆಂಬೆ ಬಾಗುತ್ತದೆ
ಗೊನೆ ಹೊತ್ತ ಬಾಳೆ ಬಾಗುತ್ತದೆ
ತೆನೆ ಹೊತ್ತ ದಂಟು ಬಾಗುತ್ತದೆ
ಏನೇನೂ ಇಲ್ಲದುದು ಬೀಗುತ್ತದೆ ನೋಡಾ,
ಸ್ವತಂತ್ರ ಧೀರಸಿದ್ದೇಶ್ವರಾ!
*
೫೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಅವರಿಗೆ ಸಂದಿದೆ. ಕನ್ನಡ ನಿಘಂಟು ಸಮಿತಿ, ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ , ಬಸವ ಸಮಿತಿ, ಕರ್ನಾಟಕ ಜಾನಪದ ಟ್ರಸ್ಟ್, ಇನ್ನಿತರ ಹಲವು ಮಹತ್ವದ ಸಂಸ್ಥೆ ಸಮಿತಿಗಳಲ್ಲಿ ಅವರು ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಉತ್ತಮ ವಾಗ್ಮಿಗಳೂ ಆಗಿದ್ದ ಅವರು ಅಕ್ಷರಶಃ ಕನ್ನಡಿಗರಿಗೆ ಕಾವ್ಯಾನಂದವನ್ನು ನೀಡಿದವರಾಗಿದ್ದರು. ೧೯೯೪ ಸೆಪ್ಟೆಂಬರ್ ೫ ರಂದು ಅವರು ನಿಧನ ಹೊಂದಿದಾಗ ಅವರಿಗೆ ೭೫ ವರ್ಷ.
– ಎಲ್. ಎಸ್. ಶಾಸ್ತ್ರಿ