
ಹದಿನೈದು ವರ್ಷಗಳ ಹಿಂದೆ ( 22-05-2010) ದುಬೈನಿಂದ 166 ಪ್ರಯಾಣಿಕರನ್ನು ಹೊತ್ತುತರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ 158 ಮಂದಿ ಸಾವಿಗೀಡಾಗಿದ್ದರು.
ಸಾವು-ನೋವುಗಳಿಗೆ ಜಾತಿ-ಧರ್ಮ, ಬಡತನ-ಶ್ರೀಮಂತಿಕೆಯ ಅಂತರಗಳಿಲ್ಲ. ಎಲ್ಲರ ನೋವು-ಸಂಕಟ ಒಂದೇ ತೆರನದ್ದು. ಆದರೆ ಇಂತಹ ಅಪಘಾತದಲ್ಲಿ ಬದುಕುಳಿದವರ ಬದುಕು ಒಂದೇ ರೀತಿ ಇರುವುದಿಲ್ಲ.
ನಿನ್ನೆಯ ವಿಮಾನ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಬಹುತೇಕ ಮಂದಿ ಶ್ರೀಮಂತ ಮತ್ತು ಮೇಲುಮಧ್ಯಮ ವರ್ಗಕ್ಕೆ ಸೇರಿದವರು. ಆದರೆ ಮಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಶೇಕಡಾ 90ರಷ್ಟು ಮಂದಿ ಬಡ-ಮಧ್ಯಮ ಕುಟುಂಬಕ್ಕೆ ಸೇರಿದವರು. ಖಾಸಗಿ ಕಂಪೆನಿಗಳಲ್ಲಿ ಜವಾನರು, ಕಾರ್ಖಾನೆಗಳ ಕಾರ್ಮಿಕರು, ಕೂಲಿಯಾಳುಗಳು. ಸೂಪರ್ ವೈಸರ್ ಗಳು, ಡ್ರೈವರ್, ಕುಕ್ ಗಳಾಗಿದ್ದವರು. ಈ ನತದೃಷ್ಟ ಕುಟುಂಬಗಳ ಬದುಕನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಜಾವಾಣಿಯಲ್ಲಿ ನಾನು ಬರೆದಿದ್ದ ಅಂಕಣ ಕೆಳಗಿದೆ:
“ನನ್ನ ಮಗ ಸಾಯಲಿಕ್ಕೆ ಅಲ್ಲಿಗೆ ಹೋಗಬೇಕಿತ್ತಾ?’
“ಎನ್ನ ಮಗೆ ಸೈಯರೆ ಅಡೆಗೇ ಪೋವಡಿಂತ್ ಡಾ ? ( ನನ್ನ ಮಗ ಸಾಯಲಿಕ್ಕೆ ಅಲ್ಲಿಗೇ ಹೋಗಬೇಕಿತ್ತಾ?) ಎಂದು ದು:ಖತಪ್ತ ತಾಯಂದಿರು ಊರಲ್ಲಿ ಕೇಳುವುದನ್ನು ನಾನೆಷ್ಟು ಬಾರಿ ಕೇಳಿಸಿಕೊಂಡಿದ್ದೇನೋ ಗೊತ್ತಿಲ್ಲ ಬಹುಶಃ ನೂರಾರು ಬಾರಿ.
ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ನಿತ್ಯ ಯಾವುದಾದರೂ ಒಂದು ಮನೆಯಲ್ಲಿ ದಿನದ ಯಾವುದೋ ಹೊತ್ತು., ಕರುಳುಕಿತ್ತು ಬರುವಂತಹ ರೋಧನದೊಂದಿಗೆ ಇಂತಹದೊಂದು ಪ್ರಶ್ನೆ ಕಿವಿಗಪ್ಪಳಿಸುತ್ತಲೇ ಇರುತ್ತದೆ. ಮೊನ್ನೆ ಶನಿವಾರ ಕೂಡಾ ರಾಜ್ಯದ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳ ನೂರಾರು ಮನೆಗಳಲ್ಲಿ ನೂರಾರು ತಾಯಂದಿರು ಒತ್ತೊತ್ತಿ ಬರುತ್ತಿರುವ ಅಳುವಿನೊಂದಿಗೆ ಈ ಒಂದು ಪ್ರಶ್ನೆಯನ್ನು ಖಂಡಿತ ಕೇಳಿರುತ್ತಾರೆ.
ಬಜ್ಪೆಯಲ್ಲಿ ಅಪಘಾತಕ್ಕೀಡಾಗಿ ಸುಟ್ಟು ಹೋದ ವಿಮಾನದಲ್ಲಿದ್ದ ಹೆಚ್ಚಿನವರು ಬದುಕನರಸುತ್ತಾ ದೂರದ ದುಬೈಗೆ ಹೋದವರು. ಊರಲ್ಲಿ ತಮ್ಮನ್ನೇ ನಂಬಿದವರಿಗೊಂದು ಬದುಕು ಕಟ್ಟಿಕೊಡಲು ಬೆವರು ಸುರಿಸುತ್ತಿದ್ದವರು. ಅವರಲ್ಲಿ ಐದಾರು ಆದೃಷ್ಟಶಾಲಿ ಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಮೊನ್ನೆ ಶವಗಳಾಗಿ ಮನೆ ಸೇರಿದ್ದಾರೆ, ಇಂತಹ ಸಂದರ್ಭಗಳಲ್ಲಿ ತಾಯಿ ಮನಸ್ಸು ‘ಊರ ಲ್ಲಿಯೇ ಇದ್ದುಬಿಟ್ಟಿದ್ದರೆ ಮಗ ಬದುಕಿರುತ್ತಿದ್ದನೋ ಏನೋ? ಎಂದು ರೋದಿಸುವುದು ಸಹಜ.
ಆದರೆ ಮಗ ಊರಲ್ಲಿಯೇ ಇದ್ದುಬಿಡಲು ಸಾಧ್ಯ ಇರಲಿಲ್ಲ ಎನ್ನುವ ಸತ್ಯ ಆ ತಾಯಿಗೂ ಗೊತ್ತು. ಅದಕ್ಕಾಗಿಯೇ ಅಲ್ಲವೇ ಆ ತಾಯಿ ಕೊನೆಗಾಲದಲ್ಲಿ ತನ್ನ ಆಸರೆಗೆ ಯಾರೂ ಇಲ್ಲದಿದ್ದರೂ ಸರಿ ‘ಮಗ ಚೆನ್ನಾಗಿ ಸಂಪಾದನೆ ಮಾಡಿ ನಾಲ್ಕು ಜನರ ಎದುರು ತಲೆ ಎತ್ತಿ ಬದುಕಲಿ’ ಎಂದು ಹರಸಿ ದುಬೈಗೆ ಹೋಗುವ ವಿಮಾನಕ್ಕೆ ಹತ್ತಿಸಿ ಟಾಟಾ ಹೇಳಿ ಕಣ್ಣೀರೊರೆಸಿಕೊಂಡರು. ಊರಿನ ಭೂತಕ್ಕೆ ಹರಕೆ ಕೊಟ್ಟು ‘ದಂಡಿನ ರಾಜ್ಯಕ್ಕೆ ಹೋದರೂ ಗುಂಡಿನ ಪೆಟ್ಟು ಬೀಳದ ಹಾಗೆ ಕಾಪಾಡು’ ಎಂದು ಅಡ್ಡಬಿದ್ದದ್ದು. ಆದರೆ ಮೊನ್ನೆ ವಿಮಾನ ಹಾದಿ ಕಣಿವೆಗೆ ಬಿದ್ದು ಬೆಂಕಿ ಉಂಡೆಯಾದಾಗ ಯಾವ ದೇವರು-ದೈವವೂ ಕಾಪಾ ಡಲಿಲ್ಲ ಎನ್ನುವುದು ಬೇರೆ ಮಾತು.
ಒಂದು ಕಾಲದಲ್ಲಿ ಮಂಗಳೂರು ಉಡುಪಿಗಳಿಗೆ ಸಾವನ್ನು ಹೊತ್ತಿರುವ ಹೆಚ್ಚಿನ ಸುದ್ದಿಗಳು ಬರುತ್ತಿದ್ದದ್ದು ಮುಂಬೈ ಕಡೆಯಿಂದ. ಇತ್ತೀಚೆಗೆ ಇಂತಹ ಸುದ್ದಿಗಳು ದುಬೈ, ಕುವೈತ್, ಕತಾರ್ ಗಳಿಂದಲೂ ಬರತೊಡಗಿವೆ. ಬಸ್ ಆ್ಯಕ್ಸಿಡೆಂಟ್ ಆಯಿತಂತೆ, ರೈಲಿನಿಂದ ಬಿದ್ದನಂತೆ, ಯಾರದ್ದೋ ಜೊತೆಯಲ್ಲಿ ಹೊಡೆದಾಟವಂತೆ, ಆಂಡರ್ವರ್ಲ್ಡ್ ನವರು ಸಾಯಿಸಿದರಂತೆ, ಯಾವುದೋ ರೋಗವಂತೆ,, ನೇಣು ಹಾಕಿಕೊಂಡನಂತೆ, ವಿಷ ಕುಡಿದನಂತೆ- ಹೀಗೆ ಸಾವಿಗೆ ಕಾರಣಗಳು ನೂರಾರು.
ಪ್ರತಿ ತಿಂಗಳು ತಪ್ಪದೆ ಮನಿಯಾರ್ಡರ್ ಹಿಡಿದುಕೊಂಡು ಬರುತ್ತಿದ್ದ ಪೋಸ್ಟ್ ಮ್ಯಾನ್ ಹೊತ್ತಲ್ಲದ ಹೊತ್ತಿನಲ್ಲಿ ಊರು ಪ್ರವೇಶಿಸಿದನೆಂದರೆ ಆತನ ಕೈಯ್ಯಲ್ಲೊಂದು ಟೆಲಿಗ್ರಾಂ ಇದೆಯಂದೇ ಅರ್ಥ. ತಕ್ಷಣ ಪೋಸ್ಟ್ ಮ್ಯಾನ್ ಕಾಲಿಡುವ ಮನೆಯ ಅಂಗಳದಲ್ಲಿ ಇಡೀ ಊರು ಬಂದು ಸೇರುತ್ತಿತ್ತು. ಸಾವು ಎನ್ನುವುದು ವಾಸ್ತವ, ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಸಾಧ್ಯವೂ ಇಲ್ಲ. ಆದರೆ ಎಲ್ಲ ಸಾವು ಗಳೂ ನಡುಹಗಲಲ್ಲೇ ಮನೆಯನ್ನು ಕತ್ತಲಿಗೆ ನೂಕುವುದಿಲ್ಲ. ನಡುರಾತ್ರಿಯಲ್ಲಿ ನಿದ್ದೆಗೆಡಿಸಿ ಬೆಚ್ಚಿಬೀಳಿಸುವುದಿಲ್ಲ. ಬದುಕಿದ್ದವರನ್ನು ಜೀವಂತ ಶವ ಮಾಡುವುದಿಲ್ಲ. ಇವೆಲ್ಲನಡೆಯುವುದು ಮನೆಯ ಆಧಾರಸ್ಥಂಭಗಳೇ ಕುಸಿದು ಬಿದ್ದಾಗ, ಭವಿಷ್ಯದ ಬೆಳಕು ನಂದಿಹೋದಾಗ.
ಮೊನ್ನೆಯ ವಿಮಾನ ಅಪಘಾತದಲ್ಲಿ ಸಂಭವಿಸಿರುವ ಹೆಚ್ಚಿನ ಸಾವುಗಳು ಈ ಗುಂಪಿಗೆ ಸೇರಿದ್ದು, ತಾಯಿಯ ಕಾಲುನೋವಿನ ಚಿಕಿತ್ಸೆಗೆಂದು ಬರುತ್ತಿದ್ದ ಕಕ್ಕಿಂಜೆಯ ಕೆ.ಎಚ್, ಉಸ್ಮಾನ್, ಸತ್ತ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬ್ರಹ್ಮಾವರದ ಶೈಲೇಶ್ ರಾವ್. ವೃದ್ಧ ತಾಯಿಯನ್ನು ದುಬೈಗೆ ಕರೆದೊಯ್ಯಲು ಬರುತ್ತಿದ್ದ ಶಶಿಕಾಂತ್ ಪೂಂಜಾ, ಕುಟುಂಬದ ಪೋಷಣೆಗಾಗಿ ದುಬೈನಲ್ಲಿರುವ ಪತಿಗೆ ನೆರವಾಗಲು ಕಂಪ್ಯೂಟರ್ ಶಿಕ್ಷಣ ಪಡೆಯಲು ಊರಿಗೆ ಬರುತ್ತಿದ್ದ ಶಕ್ತಿನಗರದ ಚೇತನಾ ಮುಖೇಶ್, ಮದುವೆಯಾಗಲೆಂದು ಬರುತ್ತಿದ್ದ ಕುಂದಾ ಪುರದ ಅರುಣ್ ಕುಮಾರ ಶೆಟ್ಟಿ, ತಂಗಿಯ ಮದುವೆಗಾಗಿ ಬರುತ್ತಿದ್ದ ಕಾಸರಗೋಡು ವೇಣೂರಿನ ಅನ್ವರ್ ಸಿದ್ದಿಕ್, ಅಣ್ಣನ ಮದುವೆಗಾಗಿ ಬರುತ್ತಿದ್ದ ಮಂಚಕಲ್ ನ ಪ್ರವೀಣ್ ಶೆಟ್ಟಿಗಾರ್….ಹೀಗೆ ಸಾವಿಗೀಡಾದವವರ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತಾ ಹೋದರೆ ಮನಸ್ಸು ಕಲಕಿಹೋಗುತ್ತದೆ. ಇವರ್ಯಾರೂ ಡಾಕ್ಟರ್, ಎಂಜಿನಿಯರ್ ಇಲ್ಲವೇ ಉದ್ಯಮಿಗಳಲ್ಲ, ಖಾಸಗಿ ಕಂಪೆನಿಗಳಲ್ಲಿ ಮ್ಯಾನೇಜರ್, ಸೂಪರ್ ವೈಸರ್ ಆಗಿದ್ದವರು, ಕಾರ್ಖಾನೆಗಳಲ್ಲಿ ಕೂಲಿಯಾಳುಗಳಾಗಿದ್ದವರು ಡ್ರೈವರ್, ಟೈಲರ್, ಕುಕ್ಗಳಾಗಿದ್ದವರು.
ಪ್ರತಿ ವರ್ಷದ ಏಪ್ರಿಲ್-ಮೇ ತಿಂಗಳುಗಳು ಅವಿಭಜಿತ ದಕ್ಷಿಣ ಕನ್ನಡದ ‘ಕೌಟುಂಬಿಕ ಸಮಾವೇಶ’ದ ಕಾಲ. ಈ ಕಾಲದಲ್ಲಿಯೇ ಮದುವೆ, ಭೂತಕೋಲ ನಾಗಬಲಿ ಅಂಕ ಆಯನ ಎಲ್ಲವೂ ನಡೆಯುವುದು, ಊರಲ್ಲಿಯೇ ಬಿಟ್ಟುಹೋದ ಹೆಂಡತಿ-ಮಕ್ಕಳ ಜತೆ ಒಂದಷ್ಟು ದಿನ ಕಳೆಯಲು, ತನ್ನೊಡನೆ ಕರೆದೊಯ್ಯಲಾಗದೆ ಊರಲ್ಲಿಯೇ ಬಿಟ್ಟಿರುವ ತಂದೆ-ತಾಯಿಗಳನ್ನು ನೋಡಲು, ತಂಗಿ ತಮ್ಮಂದಿರ ಮದುವೆ ಮಾಡಿಸಲು, ಕಷ್ಟಕಾಲ ರಲ್ಲಿ ದೇವರು-ಭೂತಗಳಿಗೆ ಹೇಳಿದ್ದ ಹರಕೆಯನ್ನು ತೀರಿಸಲು, ಪರ ಊರಿನಲ್ಲಿಯೇ ಬೆಳೆದ ಮಕ್ಕಳಿಗೆ ಊರು ತೋರಿಸಲು, ಅಜ್ಜ-ಅಜ್ಜಿಯರ ದರ್ಶನ ಮಾಡಿಸಲು….. ಹೀಗೆ ಒಂದಲ್ಲ ಒಂದು ಕಾರಣಗಳನ್ನು ಮುಂದಿಟ್ಟುಕೊಂಡು ಮುಂಬೈ, ಪುಣೆ, ಗುಜರಾತ್, ದುಬೈ, ಕತಾರ್ ಗಳಿಂದ ಬರುವ ಕುಟುಂಬ ಗಳಿಂದಾಗಿ ಎರಡು ತಿಂಗಳುಗಳ ಕಾಲ ಅವಿಭ ಜಿತ ದಕ್ಷಿಣ ಕನ್ನಡ ತುಂಬಿ ತುಳುುತ್ತಿರುತ್ತದೆ. ಮೊನ್ನೆ ನಡೆದ ಅಪಘಾತದಲ್ಲಿ ಸಾವಿಗೀಡಾದವರೆಲ್ಲರೂ ಇಂತಹದ್ದೇ ಉದ್ದೇಶಗಳನ್ನು ಇಟ್ಟುಕೊಂಡು ಊರಿಗೆ ಬಂದವರು.
ಸಾಮಾನ್ಯವಾಗಿ ಒಂದು ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಕುಟುಂಬಗಳ ಹಿನ್ನೆಲೆ ಹೀಗಿರುವುದಿಲ್ಲ. ಹೆಚ್ಚಿನವರು ತಕ್ಕಮ ಟ್ಟಿಗೆ ಸ್ಥಿತಿವಂತರಾಗಿರುತ್ತಾರೆ, ವಿಮಾನ ಪ್ರಯಾಣ ಅವರ ಆಯ್ಕೆಯಾಗಿರುತ್ತದೆ. ಆದರೆ ಮೊನ್ನೆ ದುಬೈಯಿಂದ ಬಂದವರಲ್ಲಿ ಹೆಚ್ಚಿನವರಿಗೆ ವಿಮಾನ ಪ್ರಯಾಣ ಆಯ್ಕೆ ಯಾಗಿರಲಿಲ್ಲ. ಅದು ಆನಿವಾರ್ಯವಾಗಿತ್ತು. ಬಹುಶಃ ಅಲ್ಲಿಂದ ರೈಲಿನಲ್ಲಿ, ಹಡಗಿನಲ್ಲಿ ಕಡಿಮೆ ದುಡ್ಡಲ್ಲಿ ಬರುವುದು ಸಾಧ್ಯವಾಗಿದ್ದರೆ ಇವರೆಲ್ಲ ಆದರಲ್ಲಿಯೇ ಬರುತ್ತಿದ್ದರೋ ಏನೋ? ಉಳಿಸಿದ ದುಡ್ಡನ್ನು ಊರಲ್ಲಿರುವ ತನ್ನ ಮಕ್ಕಳ ಶಿಕ್ಷಣ, ಅಕ್ಕ-ತಂಗಿಯರ ಮದುವೆಗೋ, ವೃದ್ಧ ತಂದೆ-ತಾಯಂದಿರ ಚಿಕಿತ್ಸೆಗೋ ಖರ್ಚು ಮಾಡುತ್ತಿದ್ದರು, ಸಾವಿಗೀಡಾ ದವರ ಈ ಹಿನ್ನೆಲೆಯೇ ಅಪಘಾತವನ್ನು ಆಘಾತಕಾರಿಯನ್ನಾಗಿ ಮಾಡಿರುವುದು.
ಮನಸ್ಸು ಭಾರವಾಗಲು ಇನ್ನೂ ಒಂದು ಮುಖ್ಯವಾದ ಕಾರಣ ಇದೆ. ಸತ್ತವರಲ್ಲಿ ಹೆಚ್ಚಿ ನವರು ಸ್ವಭಾವದಲ್ಲಿ ಸಾಹಸಿಗಳು, ಹುಟ್ಟೂರನ್ನು ತೊರೆದು ಅಪರಿಚಿತವಾದ ದೂರದ ಬೇರೆ ರಾಜ್ಯಗಳಿಗೂ, ದೇಶಗಳಿಗೋ ಹೋಗಿ ನೆಲೆಸುವುದು ಸುಲಭದ ಕೆಲಸವೇನಲ್ಲ. ಈ ಸಾಹಸ ಮನೋಭಾವವೇ ದಕ್ಷಿಣಕನ್ನಡದ ಜನ ‘ಮಿಸ್ ವರ್ಲ್ಡ್’ನಿಂದ ಅಂಡರ್ ವರ್ಲ್ಡ್’ವರೆಗೆ ಎಲ್ಲೆಡೆ ಕಾಣಿಸಿಕೊಳ್ಳುವಂತೆ ಮಾಡಿದ್ದು. ಅವಿಭಜಿತ ದಕ್ಷಿಣ ಕನ್ನಡವನ್ನು ರಾಜ್ಯದ ಉಳಿದ ಭಾಗದ ಜನ ಬೆರಗಾಗಿ ನೋಡುವಂತೆ ಕಟ್ಟಿದ್ದವರು ಇದೇ ಸಾಹಸಿಗಳು.
ಬೆಂಗಳೂರು ಜಿಲ್ಲೆಯನ್ನು ಹೊರತುಪಡಿಸಿದರೆ ರಾಜ್ಯದ ಬೊಕ್ಕಸಕ್ಕೆ ಅತ್ಯಧಿಕ ತೆರಿಗೆ ನೀಡುತ್ತಿರುವುದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಾದರೂ ಅಲ್ಲಿನ ಜನ ತಮ್ಮ ಬದುಕಿಗಾಗಿ ಸರ್ಕಾರದ ಮೇಲೆ ಜೋತುಬಿದ್ದವರಲ್ಲ. ಇವರಲ್ಲಿ ಹೆಚ್ಚಿನವರಿಗೆ ಸರ್ಕಾರದ ಯೋಜನೆಗಳು, ಸಬ್ಸಿಡಿ, ಮೀಸಲಾತಿ ಇತ್ಯಾದಿ ಬಗ್ಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಬೇಕೆಂದು ಬಯಸಿದವರೂ ಅಲ್ಲ ಈ ಸ್ವಭಾವದಿಂದಾಗಿಯೇ ದಕ್ಷಿಣ ಕನ್ನಡದ ಜನ ಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಕುರುಡರು-ಕಿವುಡರಂತೆ ವರ್ತಿಸಲು ಕಾರಣ ಎನ್ನುವ ಆರೋಪವೂ ಇದೆ. ‘ಕಷ್ಟಪಟ್ಟು ದುಡಿಯ ಬೇಕು ಚೆನ್ನಾಗಿ ದುಡ್ಡು ಮಾಡಬೇಕು, ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕು ಮತ್ತು ಊರಲ್ಲಿ ತಲೆ ಎತ್ತಿ. ಎದೆಯುಬ್ಬಿಸಿ ಓಡಾಡಬೇಕು- ಇವಿಷ್ಟೇ ಈ ಸಾಹಸಿಗಳಿಗೆ ಗೊತ್ತಿರುವುದು, ಇದಕ್ಕಾಗಿ ಮುಂಬೈ, ದುಬೈ, ಕುವೈತ್ ಎಲ್ಲಿಗಾದರೂ ಸರಿ ಉಟ್ಟ ಉಡುಗೆಯಲ್ಲಿ ಹೊರಡಲು ರೆಡಿ.
ಈ ‘ಸಾಹಸಿ’ಗಳ ಕೊಡುಗೆಯ ಫಲವೇ ಅವಿಭಜಿತ ದಕ್ಷಿಣ ಕನ್ನಡದ ‘ಮನಿಯಾರ್ಡರ್ ಆರ್ಥಿಕತೆ’, ದಕ್ಷಿಣ ಕನ್ನಡದ ಜನ ವಲಸೆಕೋರ ರಾಗಲು ಸಾಮಾಜಿಕ, ಭೌಗೋಳಿಕ ಮತ್ತು ಪ್ರಾಕೃತಿಕ ಎರಣಗಳಿವೆ. ಪಶ್ಚಿಮದ ಕಡಲು ಮತ್ತು ಪೂರ್ವದ ಘಟ್ಟಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡದ ಎರಡು ಮೂಲ ಉದ್ಯೋಗ ಗಳಾದ ಕೃಷಿ ಮತ್ತು ಮೀನುಗಾರಿಕೆ ಮಳೆಯೊಡನೆ ನಡೆಸುವ ಜೂಜಾಟ. ಅಡಿಕೆ ಮತ್ತು ತೆಂಗು ಹೊರತುಪಡಿಸಿದರೆ ಮಳೆನೀರು ನಂಬಿರುವ ಉಳಿದ ಬೆಳೆಗಳ ಕೃಷಿ ಇಲ್ಲಿ ಎಂದೂ ಲಾಭದಾಯಕವಾಗಿರಲೇ ಇಲ್ಲ ಈ ಸ್ಥಿತಿ ಯಲ್ಲಿಯೇ ವಲಸೆ ಪ್ರಾರಂಭವಾಗಿದ್ದು.
ಊರುಬಿಟ್ಟು ಹೋದವರಲ್ಲಿ ಹೆಚ್ಚಿನವರು ಮೊದಲು ನೆಲೆ ನಿಂತದ್ದು ಮುಂಬೈನಲ್ಲಿ. ಮೊದಲು ಊರು ಬಿಟ್ಟ ಭೂಮಾಲೀಕರು ಹೋಟೆಲ್ ಗಳನ್ನು ಮಾಡಿದರೆ ಅವರ ಬೆನ್ನಲ್ಲೇ ಬಡತನ, ಅವಮಾನದಿಂದ ಮುಖ ಮುಚ್ಚಿಕೊಳ್ಳಲು ಊರು ಬಿಟ್ಟು ಓಡಿಹೋದ ಒಕ್ಕಲಿನವರು ಆ ಹೋಟೆಲ್ಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ನಂತರ ಇಬ್ಬರೂ ಕೂಡಿ ಹೋಟೆಲ್ ಉದ್ಯಮವನ್ನು ಕಟ್ಟಿ ಬೆಳೆಸಿದರು. ಇನ್ನೊಂದೆಡೆ ಅನಿಶ್ಚಿತ ಆದಾಯದ ಮೀನುಗಾರಿಕೆಯಿಂದಾಗಿ ಮೀನು ಗಾರ ಯುವಕರು ಕೂಡ ಊರು ಬಿಡತೊಡಗಿದ್ದರು. ಇವರ ಜತೆಗೆ ಕೃಷಿ ಮತ್ತು ಮೀನು ಗಾರಿಕೆಯ ಮೇಲೆಯೇ ನಿಂತಿರುವ ತಮ್ಮ ವ್ಯಾಪಾರದ ಭವಿಷ್ಯ ಮಂಕಾಗುತ್ತಿರುವುದನ್ನು ಕಂಡ ಮುಸ್ಲಿಮರು ಹೆಚ್ಚು ಆದಾಯದ ಆಕರ್ಷಣೆಯ ಕೊಲ್ಲಿ ರಾಷ್ಟ್ರಗಳೆಡೆ ವಲಸೆ ಪ್ರಾರಂಭಿಸಿದರು. ಕ್ರಿಶ್ಚಿಯನರು ಎಲ್ಲರಿಗಿಂತ ಮೊದಲೇ ಸಮುದ್ರ ಲಂಘನ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನರಿಗೆ ಪೈಪೋಟಿ ನೀಡುವ ರೀತಿಯಲ್ಲಿ ಹಿಂದೂಗಳು ಕೊಲ್ಲಿ ರಾಷ್ಟ್ರಗಳಲ್ಲಿ ಹೋಗಿ ನೆಲೆ ಸತೊಡಗಿದ್ದಾರೆ. (ಅಪಘಾತದಲ್ಲಿ ಸತ್ತವರ ಹೆಸರಿನ ಪಟ್ಟಿಯೇ ಇದಕ್ಕೆ ನಿದರ್ಶನ) ಇದ ರಿಂದಾಗಿ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಮನೆಯ ಕನಿಷ್ಠ ಒಬ್ಬ ಸದಸ್ಯ ಇಂದು ಮುಂಬೈ-ಪುಣೆ-ಗುಜರಾತ್ನಲ್ಲೋ ದುಬೈ, ಕುವೈತ್,ಬಹರೈನ್ನಲ್ಲೋ ಇದ್ದಾನೆ.
ಈ ರೀತಿ ಊರು ಬಿಟ್ಟವರ ಸಂಪಾದನೆಯ ದುಡ್ಡಿನಿಂದಲೇ ಊರಲ್ಲಿನ ಮುಳಿಹುಲ್ಲಿನ ಮನೆಗಳು ಹೆಂಚು-ತಾರಸಿಗಳ ಮನೆಗಳಾಗಿ ಪರಿವರ್ತನೆಗೊಂಡದ್ದು, ತಂಗಿ-ತಮ್ಮಂದಿರು ಕಾಲೇಜಿಗೆ ಸೇರಿದ್ದು, ತಂದೆ-ತಾಯಿಗಳು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದದ್ದು, ಲಕ್ಷ ಗಟ್ಟಳೆ ವರದಕ್ಷಿಣೆ ಕೊಟ್ಟು ಅಕ್ಕ-ತಂಗಿಯರ ಮದುವೆ ನಡೆದದ್ದು, ಹಳೆಯ ದೇವಸ್ಥಾನ-ದೈವಸ್ಥಾನಗಳ ಜೀರ್ಣೋದ್ದಾರವಾಗಿದ್ದು.
ಊರು ಬಿಟ್ಟು ಹೋದವರ ಬದುಕಿನ ಬಂಡಿ ಹಳಿಯ ಮೇಲೆಯೇ ನಡೆದಷ್ಟು ದಿನ ಎಲ್ಲವೂ ಚಂದ. ಹಳಿ ತಪ್ಪಿದರೆ ಕ್ಷಣಾರ್ಧದಲ್ಲಿ ಅವರನ್ನ ನಂಬಿದವರ ಬದುಕು ಕಣಿವೆಗೆ ಬಿದ್ದ ವಿಮಾನದಂತೆ ಸುಟ್ಟು ಬೂದಿ.
ಅಂತಹ ಕ್ಷಣಗಳಲ್ಲಿಯೇ ‘ಯಾವ ಸುಖವೂ ಬೇಡ, ಮಗು ಜೀವಂತವಾಗಿ ಕಣ್ಣೆದುರು ಇದ್ದಿದ್ದರೆ ಸಾಕಿತ್ತು’ ಎಂದು ಹೆತ್ತ ತಾಯಿಯ ಮನಸ್ಸು ಗೋಳಿಡುವುದು, ‘’ಸಾಯಲಿಕ್ಕೆ ನನ್ನ ಮಗ ಅಲ್ಲಿಗೇ ಹೋಗಬೇಕಿತ್ತಾ? ಎಂದು ಆ ತಾಯಿ ಕಂಡಕಂಡವರನ್ನು ಕೇಳುವುದು.
ಆದರೆ ಈ ದುಃಖ, ವೈರಾಗ್ಯಗಳೂ ಶಾಶ್ವತ ಅಲ್ಲ. ಆಗಲೇ ಸತ್ತವರ ಮಕ್ಕಳು, ತಮ್ಮಂದಿರು ದುಬೈನಿಂದ ಬರುವ ವೀಸಾಕ್ಕಾಗಿ ಕಾಯುತ್ತಿರುತ್ತಾರೆ. ಅದೇ ತಾಯಿ ಅವರನ್ನು ಹರಸಿ ಬಸ್-ವಿಮಾನ ಹತ್ತಿಸಿ, ಬಂದು ಕಣ್ಣಿರೊರೆಸುತ್ತಾ ಕೂರುತ್ತಾಳೆ. ಬದುಕಿನ ಬಂಡಿ ಓಡುವುದೇ ಹೀಗೆ.
-ದಿನೇಶ್ ಅಮಿನ್ ಮಟ್ಟು
-(24-05-2010)