ಮರೆಯಲಾಗದವರು

ನಿಮ್ಮ ನೆನಹಾದಾಗಲೆ ಉದಯ

ಇಳಕಲ್ಲ ಮಹಾಂತ ಜ್ಯೋತಿ

Spread the love

ನಿಮ್ಮ ನೆನಹಾದಾಗಲೇ ಉದಯ

ಚಿತ್ತರಗಿಯ ಚಿಜ್ಯೋತಿ ವಿಜಯ ಮಹಾಂತರ ಸ್ವರೂಪರು ಬಸವಸಂತಾನ ಶ್ರೇಷ್ಠರೂ, ಪರಮ ಶಿವಯೋಗಿಗಳು ಆದ ಇಲಕಲ್ಲಿನ ಪೂಜ್ಯ ಶ್ರೀ ಡಾ. ಮಹಾಂತ ಅಪ್ಪಗಳ ೭ನೇ ಲಿಂಗೈಕ್ಯ ಸಂಸ್ಮರಣೆ.

ಪೂಜ್ಯ ಮಹಾಂತ ಅಪ್ಪಗಳು ಬಸವ ತತ್ವವನ್ನೇ ಬದುಕಿ ಬಸವ ತತ್ವವನ್ನೇ ಬೋಧಿಸಿದ ನಿಜ ಜಂಗಮ ಮೂರ್ತಿಗಳು..
ಗುರುಬಸವರ ನಾಮವೇ ಪೂಜ್ಯರಿಗೆ ಅನುಕ್ಷಣದ ಮಂತ್ರವಾಗಿತ್ತು. ಉಸಿರಿಗೊಮ್ಮೆ ಬಸವ ಬಸವ ಎಂದು ಬಸವ ನಾಮದ ಜಲದಲ್ಲಿ ಮಿಂದು ಮಡಿಯಾದ ಮಹಾಂತ ಅಪ್ಪಗಳು ಈ ನಾಡಿನ ಅಪರೂಪದ ಸ್ವಾಮಿಗಳು.
ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ ಲೋಕ ವಿರೋಧಿ ಶರಣ ಯಾರಿಗೂ ಅಂಜುವನಲ್ಲ ಎಂಬ ಗುರುಬಸವ ತಂದೆಯ ಧೀರೋದ್ದಾತ್ತ ನಿಲುವನ್ನು ಅಕ್ಷರಶಃ ಆಚರಿಸಿ ತೋರಿಸಿದ ನಿರ್ಭಿಡೆಯ ಬದ್ಧತೆ ಮಹಾಂತಪ್ಪಗಳ ವ್ಯಕ್ತಿತ್ವದಲ್ಲಿ ಎದ್ದು ಕಾಣುವಂತಹದ್ದು.

ಬಹುಷಃ ಬಸವ ತತ್ವಕ್ಕೆ ಎಲ್ಲಿಯೂ ಚ್ಯುತಿ ಬರದಂತೆ ತತ್ವದ ವಿಚಾರಕ್ಕೆ ಎಂದಿಗೂ ರಾಜಿ ಮಾಡಿಕೊಳ್ಳದ ಏಕೈಕ ಮಠಾಧೀಶರು ಇಲಕಲ್ಲ ಅಪ್ಪಗಳು.
ಪೂಜ್ಯರು ಒಂದು ವಿರಕ್ತ ಮಠದ ಅಧಿಕಾರ ವಹಿಸಿಕೊಂಡಿದ್ದರೂ ಅಲ್ಲಿ ಸಾಮಾನ್ಯವಾಗಿ ಇರಬಹುದಾದ ಎಲ್ಲ ಸಾಂಪ್ರದಾಯಿಕ ವಾತಾವರಣವನ್ನು ಬುಡ ಸಹಿತ ಕಿತ್ತೆಸೆದು ಪರಿಶುದ್ಧ ಲಿಂಗಾಯತ ಆಚರಣೆಯನ್ನು ಜಾರಿಗೆ ತಂದು ತೋರಿಸಿದ ಧೀಮಂತಿಕೆ ಪೂಜ್ಯರದು.

ಅದೆಷ್ಟೋ ಮಾನ ಅಪಮಾನಗಳು, ವಿರೋಧಗಳು ಬಂದರೂ ಅದೆಲ್ಲವನ್ನೂ ಲಿಂಗಕ್ಕೆ ಅರ್ಪಿಸುತ್ತ ಅಪ್ಪಟ ಬಸವ ತತ್ವ ಆಚರಣೆಯನ್ನು ಗಟ್ಟಿಯಾಗಿ ಪ್ರತಿಪಾದಿಸಿದವರು ಮಹಾಂತ ಅಪ್ಪಗಳು.

ಲಿಂಗವಂತ ಭಕ್ತರು ಮೂಢ ನಂಬಿಕೆ ಗೆ ಒಳಗಾಗಿ ಕೊರಳಲ್ಲಿ, ಮುಂಗೈಯಲ್ಲಿ ಕರಿದಾರ, ಕೆಂಪುದಾರ, ತಾಯಿತ ಕಟ್ಟಿದ್ದು ಕಂಡರೆ ಪೂಜ್ಯರು ಕೆಂಡಾಮಂಡಲವಾಗುತ್ತಿದ್ದರು.
ತಕ್ಷಣವೇ ಆ ಕರಿದಾರ ತಾಯಿತಗಳನ್ನು ಕತ್ತರಿಸಿ ಕಿತ್ತೆಸೆದು ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗ ಧಾರಣೆ ಮಾಡಿಸುತ್ತಿದ್ದ ಸಂಗತಿ ಈಗಲೂ ನಮ್ಮ ಕಣ್ಣಿಗೆ ಕಟ್ಟಿದಂತೆ ಇದೆ.
ಹಲವು ಕೆಟ್ಟ ವ್ಯಸನಗಳಾದ ಸಾರಾಯಿ ಸೇವನೆ, ಸಿಗರೇಟು ಸೇವನೆ, ತಂಬಾಕು ಸೇವನೆ ಮೊದಲಾದ ಚಟಗಳಿಂದ ಜನರನ್ನು ಮುಕ್ತರಾಗಿಸಲು ಪೂಜ್ಯರು ಮಹಾಂತ ಜೋಳಿಗೆಯನ್ನು ಹೆಗಲಿಗೆ ಹೊತ್ತುಕೊಂಡು ನಾಡೆಲ್ಲ ಸಂಚರಿಸಿ ದುಶ್ಚಟಗಳ ಭಿಕ್ಷೆ ಎತ್ತಿದರು. ಅದೆಷ್ಟು ಜನ ತಮ್ಮ ಕೆಟ್ಟ ಹವ್ಯಾಸಗಳನ್ನು ಮಹಾಂತ ಜೋಳಿಗೆಗೆ ಅರ್ಪಿಸಿ ಸುಂದರ ಬದುಕು ರೂಪಿಸಿಕೊಂಡಿರುವರು..

ತಮ್ಮ ಶ್ರೀ ಮಠದ ಎಲ್ಲ ಶಾಖಾ ಮಠಗಳಲ್ಲಿ ನಿರಂತರವಾಗಿ ಶಿವಾನುಭವ ಆರಂಭಿಸಿ ತತ್ವಕ್ರಾಂತಿಗೈದವರು ಮಹಾಂತ ಅಪ್ಪಗಳು..
ಮಾತೃ ಹೃದಯಿ, ಮಮತಾ ಮೂರ್ತಿಯಾದ ಮಹಾಂತ ಅಪ್ಪಗಳ ನೆನಹು ಚಿರಂತನ ಸ್ಫೂರ್ತಿ..

*ಮಹಾತ್ಮರ ನೆನೆವುದೇ ಘನಮುಕ್ತಿ ಪದಂ ಶಿವಾಧವ…*

ಶಶಿಧರ ಕರವೀರಶೆಟ್ಟರ ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *

Back to top button