ನಿಮ್ಮೊಂದಿಗೆ

ಬಸವ ತತ್ವದೊಂದಿಗೆ ಬೆರೆತು ಹೋಗಿದ್ದ ಮಹಾಂತೇಶ

ವಿಶ್ವಾರಾಧ್ಯ ಸತ್ಯಂಪೇಟೆ

Spread the love

ದಾವಣಗೆರೆಯ ಮಹಾಂತೇಶ್ ದೈಹಿಕವಾಗಿ ಇನ್ನು ಮುಂದೆ ಕಾಣಲಾಗುವುದಿಲ್ಲ ಎಂಬ ಮಾತನ್ನು ನಂಬಲಾಗುತ್ತಿಲ್ಲ. ಮಹಾಂತೇಶ ಅಗಡಿಯವರದು ಬಸವ ತತ್ವದ ಜೊತೆಗೆ ಬೆರೆತು ಹೋದ ಜೀವ. ಬಸವಣ್ಣ ಹಾಗೂ ಶರಣರ ಚಿಂತನೆಗಳಿಗಾಗಿ ತಮ್ಮ ಹೃದಯವನ್ನು ಯಾವತ್ತೂ ತೆರೆದಿಟ್ಟಿದ್ದರು.

ಪ್ರಖರ ವೈಚಾರಿಕ ಮತ್ತು ಶರಣ ತತ್ವ ಚಿಂತಕರಾದ ಪ್ರೊ.ವಿ.ವಿ.ಸಂಗಮದ, ಶರಣೆ ವಾಗ್ದೇವಿ ಅವರೊಂದಿಗೆ ಅಪರೂಪದ ಕ್ಷಣ ಕಳೆದಿದ್ದರು. ಶರಣ ತತ್ವ ಪ್ರಸಾರ ಮಾಡುವ ಮಠಾಧೀಶರನ್ನು ಕಂಡರೆ ಉಲ್ಲಾಸವೋ ಉಲ್ಲಾಸ. ಅವರ ಬೇಕುಗಳಿಗೆ ಅವರು ಹೇಳುವ ಮುನ್ನವೆ ಸ್ಪಂದಿಸುವ ಹೃದಯ ಶ್ರೀಮಂತಿಕೆ. ಕರೋನಾ ಕಾಲದಲ್ಲಿ ಹಲವಾರು ಮಠಾಧೀಶರಿಗೆ ದಾಸೋಹ ಸಲ್ಲಿಸಿ ಕೃತಾರ್ಥವಾದ ಬದುಕು.

ಆರಂಭದಲ್ಲಿ ಆರ್.ಎಸ್.ಎಸ್.ನೊಳಗೆ ಇದ್ದರು. ಅಲ್ಲಿನ ಒಳಗುಟ್ಟುಗಳು ಅರ್ಥವಾಗುತ್ತಲೆ ಬಸವ ತತ್ವ ಅಪ್ಪಿಕೊಂಡಿದ್ದರು. ಶ್ರೀಯುತ ಚಂದ್ರಕಾಂತ ಬೆಲ್ಲದ ಖಾಸಾ ಅಕ್ಕನ ಮಗನಾಗಿದ್ದರೂ ಒಮ್ಮೆಯೂ ಯಾರ ಮುಂದೆ ಬೀಗಲಿಲ್ಲ. ಶ್ರೀ ಅರವಿಂದ ಬೆಲ್ಲದ ಅಗಡಿಯವರ ಅಳಿಯ ಎಂಬ ವಿಷಯ ಕೂಡ ಯಾರೊಂದಿಗೂ ಹಂಚಿಕೊಳ್ಳದ ಸಂಕೋಚದ ಮನಸ್ಸು.

ಬಸವಾದಿ ಶರಣರ ಚಿಂತನೆ ಅನುಭಾವಕ್ಕಾಗಿ ಗದುಗಿನ ,ಇಳಕಲ್ಲಿನ, ಮುಂಡರಗಿಯ ಶ್ರೀ ನಿಜಗುಣ ಸ್ವಾಮೀಜಿಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ಲಿಂಗಾಯತ ಧರ್ಮಕ್ಕೆ ಚ್ಯುತಿ ತರುವ ಕೆಲಸವನ್ನು ಯಾರು ಮಾಡಿದರೂ ಸಹಿಸದ, ಅದನ್ನು ಖಂಡಿಸುವ ಗಟ್ಟಿತನ ಮಹಾಂತೇಶ ರೂಢಿಸಿಕೊಂಡಿದ್ದರು.

ಮೂರ್ನಾಲ್ಕು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಶ್ರೀ ನಿಜಗುಣ ಸ್ವಾಮೀಜಿಗಳ ಬಸವ ತತ್ವ ಪ್ರವಚನ ಏರ್ಪಡಿಸಿ ಶರಣ ತತ್ವದ ಚಿಂತನೆಗಳು ದಾವಣಗೆರೆಯ ನೆಲದಲ್ಲಿ ಬಿತ್ತಲು ತಹತಹಿಸಿದ್ದರು. ಮತ್ತೆಯೂ ಪ್ರವಚನ ಏರ್ಪಡಿಸುವ ಹಂಬಲ ಹೊಂದಿದ್ದರು.

ದಾವಣಗೆರೆಯ ಬಸವ ಬಳಗಕ್ಕೊಂದು ಬಲವನ್ನು, ಜಾಗತಿಕ ಲಿಂಗಾಯತ ಮಹಾಸಭೆಗೊಂದು ಚೈತನ್ಯವನ್ನು ತಂದಿದ್ದರು. ಯಾವುದೆ ಹುದ್ದೆ ಬಯಸದೆ, ಸುದ್ದಿಯಲ್ಲಿರದೆ ನೆಲದ ಮರೆಯ ನಿಧಾನದಂತೆ ಒಳಗೊಳಗೆ ತತ್ವ ಪ್ರಸಾರ ಮಾಡುತ್ತಿದ್ದರು. ವೇದಿಕೆ, ಹಾರ ತುರಾಯಿಗಳಿಂದ ಬಹುದೂರ.

ನನ್ನಂಥವರನ್ನು ಕಂಡರೆ ಕಾಪಿಟ್ಟು ಜತನವಾಗಿ ಕಾಯುವ ಮನಸ್ಥಿತಿ. ಬಸವ ತತ್ವ ಬೆಳೆಯಲಿ‌.ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಲಿ ಎಂಬ ಕನಸುಗಳನ್ನು ಇಟ್ಟುಕೊಂಡಿದ್ದ ಜೀವ ಒಮ್ಮಿಂದೊಮ್ಮೆ ಕಣ್ಮರೆಯಾದುದು ಮರೆಯಲಾಗದ ನೋವು ಉಂಟು ಮಾಡಿದೆ.

೦ ವಿಶ್ವಾರಾಧ್ಯ ಸತ್ಯಂಪೇಟೆ

Leave a Reply

Your email address will not be published. Required fields are marked *

Back to top button