
ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡೀಸ್ ಬದುಕಿದ್ದರೆ ಇಂದು ಅವರಿಗೆ ೯೬ ನೆ ವರ್ಷಕ್ಕೆ ಕಾಲಿಡುತ್ತಿದ್ದರು. ನಾನು ಅವರನ್ನು ನೋಡಿದ್ದು ಐದು ಸಲ.ಒಂದೆರಡು ತಾಸು ಕುಳಿತು ಮಾತಾಡಿದ್ದು ಮೂರು ಸಲ.ಅವರ ಸರಳ ವ್ಯಕ್ತಿತ್ವದ ಬಗ್ಗೆ ವಿವರಿಸಬೇಕಾಗಿಲ್ಲ. ನರಗುಂದ ರೈತರ ಬಂಡಾಯವಾದಾಗ ಪೊಲೀಸರು ಗೊಲಿಬಾರ್ ಮಾಡಿದಾಗ ನರಗುಂದದಿಂದ ಬೆಂಗಳೂರಿಗೆ ಹೊರಟ ರೈತ ಜಾತಾ ಹುಬ್ಬಳ್ಳಿಗೆ ಬಂದಾಗ ಜಾರ್ಜ್ ಜಾತಾದೊಟ್ಟಿಗೆ ಹೆಜ್ಜೆ ಹಾಕಿದರು.ಹಳೆ ಹುಬ್ಬಳ್ಳಿಯ ಕಮ್ಯುನಿಸ್ಟ್ ಪಕ್ಷದ ಕಚೇರಿಯ ಮಾಳಿಗೆಯ ಮೇಲೆ ನಿರ್ಮಿಸಿದ ವೇದಿಕೆಯಲ್ಲಿ ನಿಂತು ಜಾರ್ಜ್ ಗುಡುಗಿದ್ದರು.ಅಂದಿನ ಸಭೆಯಲ್ಲಿ ನಾನು ಕಾರ್ಯಕ್ರಮ ನಿರ್ವಹಣೆ ಮಾಡಿದ್ದೆ.ಇದಾದ ನಂತರ ಜಾರ್ಜ್ ಫರ್ನಾಂಡೀಸ್ ಅವರನ್ನು ಭೇಟಿ ಮಾಡುವ ಅವಕಾಶ ದೊರಕಿದ್ದು ೧೯೯೩ ರ ಮಾರ್ಚ್ ನಲ್ಲಿ . ದಿಲ್ಲಿಯಿಂದ ಬೆಂಗಳೂರಿಗೆ ಬಂದು ರಿಚಮಂಡ್ ರಸ್ತೆಯಲ್ಲಿ ಇದ್ದ ಸೋದರ ಲಾರೆನ್ಸ್ ಮನೆಯಲ್ಲಿ ತಂಗಿದ್ದ ಜಾರ್ಜ ಅವರನ್ನು ಭೇಟಿ ಆಗುವ ಅವಕಾಶ ಕಲ್ಪಿಸಿದವರು ಜಾರ್ಜ್ ಆಪ್ತರಾಗಿದ್ದ ಶಿವಮೊಗ್ಗದ ಕಾರ್ಮಿಕ ನಾಯಕರಾಗಿದ್ದ ಕೆ.ಸಿ.ಬಸವರಾಜು.ಆಗ ಸಂಯುಕ್ತ ಕರ್ನಾಟಕ ಪತ್ರಿಕೆಯ ಬೆಂಗಳೂರು ಕಚೇರಿ ಯಲ್ಲಿದ್ದ ನನ್ನನ್ನು ಜಾರ್ಜ್ ಬಳಿ ಕರೆದೊಯ್ದ ಬಸವರಾಜು ಮಾತಾಡುವ ಅವಕಾಶ ಮಾಡಿಕೊಟ್ಟರು.ಭಾರತದ ಸಮಾಜವಾದಿ ಚಳವಳಿ, ಕೋಮುವಾದ ಹೀಗೆ ಹಲವಾರು ವಿಷಯಗಳ ಕುರಿತು ಮಾತಾಡಿದೆವು. ಆಗ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡು ಮೂರು ತಿಂಗಳ ಮೇಲಾಗಿತ್ತು.ಅದರ ಬಗ್ಗೆ ಪ್ರಶ್ನಿಸಿದಾಗ ಬೇಸರದಿಂದ ಮಾತಾಡಿದ ಜಾರ್ಜ್ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅನಿವಾರ್ಯವಾಗಿ ಬಿಜೆಪಿ ಜೊತೆ ರಾಜಿ ಮಾಡಿಕೊಂಡಿದ್ದರು.ಈ ಬಗ್ಗೆ ಪ್ರಶ್ನಿಸಿದಾಗ ಲಾಲೂ ಅವರ ಕಿರಿ, ಕಿರಿ ಸಾಕಾಗಿತ್ತು ಎಂದು ಅವರನ್ನು ಬೈಯುತ್ತ ಬೈಯುತ್ತ ಹಾರಿಕೆ ಉತ್ತರ ನೀಡಿದರು.ಬಿಜೆಪಿ ಜೊತೆ ಸೇರಿದ್ದಕ್ಕೆ ಅವರ ಬಳಿ ಸಮರ್ಥನೆ ಇರಲಿಲ್ಲ.ಆದರೆ ರಾಷ್ಟ್ರಮಟ್ಟದ ನಾಯಕ ಪುರಸೊತ್ತು ಮಾಡಿಕೊಂಡು ಅಷ್ಟು ಹೊತ್ತು ಮಾತಾಡಿದರಲ್ಲ ಇದು ಅವರ ಸರಳತೆಗೆ ಸಾಕ್ಷಿ.ಅದೇನೇ ಇರಲಿ ಅವರ ಪ್ರಾಮಾಣಿಕತೆ, ಬದ್ದತೆ ಪ್ರಶ್ನಾತೀತ.ಅವರ ಹೆಸರಿನಲ್ಲಿ ಬೇರಾರೋ ಹಣ ಮಾಡಿಕೊಂಡರು.ರಕ್ಷಣಾ ಸಚಿವರಾಗಿದ್ದಾಗ ಅವರ ಮೇಲೆ ಬಂದ ಆರೋಪ ಕೂಡ ಹುರುಳಿಲ್ಲದ್ದು.ಒಮ್ಮೆ ಸಾಮಾಜಿಕ ಪತ್ರಕರ್ತರ ಸಮ್ಮೇಳನದ ಲ್ಲಿ ಪಾಲ್ಗೊಳ್ಳಲು ೨೦೦೪ ರಲ್ಲಿ ದಿಲ್ಲಿ ಗೆ ಹೋದಾಗ ಕೃಷ್ಣ ಮೆನನ್ ಮಾರ್ಗದಲ್ಲಿ ಇದ್ದ ಜಾರ್ಜ್ ಮನೆಗೆ ಹೋದೆ. ಅಲ್ಲಿ ಯಾವುದೇ ಭದ್ರತಾ ಕಾವಲು ಇರಲಿಲ್ಲ. ಯಾರು ಬೇಕಾದರೂ ಪ್ರವೇಶಿಸಬಹುದಾಗಿತ್ತು.ನಾನು ಹೋದ ದಿನ ದಿನ ಬಿಹಾರದಿಂದ ಬಂದಿದ್ದ ಕೃಷಿ ಕಾರ್ಮಿಕರು ಮನೆ ತುಂಬಾ ತುಂಬಿದ್ದರು. ಜಾರ್ಜ್ ಆಪ್ತರಾಗಿದ್ದ ಕುಂದಾಪುರದ ಅನಿಲ ಕುಮಾರ ಹೆಗ್ಡೆ ಅವರು ನನ್ನ ಸ್ನೇಹಿತರು .ಅವರಿಗೆ ಫೋನ್ ಮಾಡಿ ಹೋದಾಗ ಪಾಟ್ನಾ ಕ್ಕೆ ಹೊರಟಿದ್ದ ಜಾರ್ಜ್ ಫರ್ನಾಂಡೀಸ್ ಅವಸರದಲ್ಲಿದ್ದರು.ಆದರೆ ಗುರುತು ಹಿಡಿದು ಮಾತಾಡಿದರು.ಮನೆಯ ಹಾಲ್ ನಲ್ಲಿ ಚೇ ಗೆವೆರಾ,ಪೆರಿಯಾರ್, ಅಂಬೇಡ್ಕರ್, ಲೋಹಿಯಾ ಫೋಟೋ ಗಳು ಕಂಡವು. ಇಂಥ ಜಾರ್ಜ್ ನೆನಪಿನಂಗಳದಲ್ಲಿ ಸದಾ ಉಳಿಯುತ್ತಾರೆ.
_ಸನತ್ ಕುಮಾರ ಬೆಳಗಲಿ