
ನಮ್ಮ ಮಹಾಂತೇಶ ಅಗಡಿ ಲಿಂಗೈಕ್ಯರಾದರು
ದಾವಣಗೆರೆಯ ಬಸವ ತತ್ವದ ಬಳ್ಳಿ ಮಹಾಂತೇಶ ಅಗಡಿ ಅವರು ಕ್ರಿಯಾಶೀಲ ವ್ಯಕ್ತಿ. ಬಸವ ತತ್ವ ಪ್ರಸಾರ ಮಾಡಬೇಕೆನ್ನುವ ಅದಮ್ಯ ಉತ್ಸಾಹ. ಬಸವ ಚೇತನಗಳನ್ನು ತನ್ನ ಪ್ರೀತಿಯ ಚಿಪ್ಪಿನಲ್ಲಿ ಬಚ್ಚಿಟ್ಟುಕೊಳ್ಳುವ ತವಕ.
ಬಸವ ತತ್ವಕ್ಕೆ ಚ್ಯುತಿ ಆಗುತ್ತದೆ ಎಂದು ಖಾತ್ರಿಯಾಗುತ್ತಿದ್ದಂತೆ ಗಣಾಚಾರಿಯಾಗಿ ಹೊರ ಹೊಮ್ಮುತ್ತಿದ್ದರು. ಲಿಂಗಾಯತ ಧರ್ಮದ ಹಲವಾರು ಪ್ರತಿಭೆಗಳನ್ನು ಕಂಡು ಅವರಿಗೆ ಬೆನ್ನೆಲುಬಾಗಿ ನಿಂತರು.ತಮ್ಮ ಕಾಯಕದ ಜೊತೆ ಜೊತೆಗೆ ಬಸವ ತತ್ವನ್ನು ಹೊತ್ತುಕೊಂಡು ಜೀವಿಸಿದರು.
ಇತ್ತೀಚೆಗೆ ಶ್ರೀ ಶಂಕರ ಬಿದರಿಯವರು ಬಸವ ಜಯಂತಿಗಾಗಿ ತೆಗೆದುಕೊಂಡ ನಿಲುವನ್ನು ವಿರೋಧಿಸಿದರು. ಅವರೊಂದಿಗೆ ಮಾತಿನ ಕದನಕ್ಕೆ ಇಳಿದರು. ಬಿದರಿಯವರ ನಿಲುವನ್ನು ವಿರೋಧಿಸುವ ಬರಹಗಾರರ ಬರೆಹವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಸರಿಸುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದರು.
ದಾವಣಗೆರೆಯ ಹೊನ್ನಾಳಿಯಲ್ಲಿ ನನ್ನ ಮೇಲೊಂದು ಮಾನನಷ್ಟ ಮೊಕದ್ದಮೆ ದಾಖಲಾದಾಗ ತುಂಬಾ ಕಳವಳ ಪಟ್ಟರು. ನನ್ನ ಬೆಂಗಾವಲಾಗಿ ನಿಂತರು. ಮಾನಸಿಕವಾಗಿ ಸದಾ ನನ್ನೊಂದಿಗೆ ಇದ್ದರು. ಎಸ್ಪಿ ಕಚೇರಿಗೆ ಬಂದರು. ಹೊನ್ನಾಳಿಯ ಪೊಲೀಸ್ ಠಾಣೆಗೆ ಜನರನ್ನು ನನ್ನೊಂದಿಗೆ ಕಳಿಸಿದರು. ಬಸವಮಾರ್ಗದ ಬರಹವನ್ನು, ಬಸವ ಮಾರ್ಗ ಟಿ.ವಿಯ ಹಲವಾರು ವಿಡಿಯೋ ಗಳನ್ನು ಸಾಕಷ್ಟು ಸಲ ಹಂಚಿಕೊಂಡು ಖುಷಿ ಪಟ್ಟಿರುವ ಜೀವ ಮಹಾಂತೇಶ್.
ಅವರ ನಿದ್ರೆ, ಸ್ವಲ್ಪ ಆರ್ಭಟ ಮಾಡುವಂಥದ್ದು. ನಾನು ಹಗಲೆಲ್ಲ ತಮಾಷೆ ಮಾಡಿದರೂ ಒಂಚೂರು ಕೋಪಗೊಳ್ಳದ ಹಸನ್ಮುಖ ಮನಸ್ಸು. ದಾವಣಗೆರೆಯ ತಮ್ಮ ಮನೆಗೆ ಕರಕೊಂಡು ಹೋಗಿ ಮಾಡಿ ಆತಿಥ್ಯವನ್ನು ಮರೆಯುವುದು ಹೇಗೆ ?
ದಾವಣಗೆರೆಯ ಬಸವ ತತ್ವದ ಅಪ್ಪಟ ಬಂಗಾರ ಕಣ್ಣಿಂದ ಮರೆಯಾದುದು ನೋವು ತರುವ ಸಂಗತಿಯಾಗಿದೆ.
ವಿಶ್ವಾರಾಧ್ಯ ಸತ್ಯಂಪೇಟೆ
🥲🙏