
“ಆವಾಗ್ಲೆ ನಂಗೆ ಅಸ್ಪ್ರಶ್ಯತೆ ಅಂದ್ರೆ ಗಾಯಾಂತ ಗೊತ್ತಾಗಿದ್ದು”
‘ಮರಿಸ್ವಾಮಿ ಅಂತ ಒಬ್ರು ಇದ್ರು. ಅವರು ಹಿಂದಿ ಪ್ರೊಫೆಸರ್ ಆಗಿದ್ರು. ಕೊನೆಗೆ ಬೌದ್ಧ ಬಿಕ್ಷುವಾಗಿ ಇತ್ತೀಚೆಗೆ ತೀರಿಕೊಂಡ್ರು. ಅವರು ಪ್ರೈಮರಿ ಸ್ಕೂಲಲ್ಲಿ ಮೇಷ್ಟರಾಗಿದ್ದಾಗ ಯಾರದೋ ಜಗುಲಿಯಲ್ಲಿ ಕೂತು ಬಸ್ಸಿಗೆ ಕಾಯ್ತಾ ಇದ್ರು. ಯಾರದೋ ಮೇಲುಜಾತಿಯವರ ಜಗುಲಿ. ಆ ಮನೆಯ ಯಜಮಾನನಿಗೆ ಸ್ವಲ್ಪ ಕಣ್ಣು ಕಾಣಿಸ್ತಿರ್ಲಿಲ್ಲ. ಇವರು ಬಿಳಿ ಬಟ್ಟೆ ಹಾಕಿಕೊಂಡು ಕೂತಿರ್ತಾರೆ.
‘ಯಾರೋ ಅಲ್ಲಿ ಕೂತಿರೋನು?’ಅಂತ ಆ ಯಜಮಾನ ಮಗನಲ್ಲಿ ಕೇಳ್ತಾನೆ. ಅದಕ್ಕೆ ಆ ಮಗ ಹೇಳ್ತಾನೆ, ‘ಅದು ಮೇಷ್ಟ್ರು ಅಪ್ಪಾ.. ಅದೇ ಹೆಂಡ ಮಾರ್ತಾರಲ್ಲ ಮಾರಯ್ಯ ಅಂತ ಅವರ ಮಗ’ ಅಂತ. ‘ಏನು? ನಮ್ಮ ಮನೆ ಮುಂದೆ ಕೂತಿದಾನಾ? ಎದ್ದು ಹೋಗು ಅಂತ ಅನ್ನು’ ಅಂತ ಅಪ್ಪ ಕೂಗು ಹಾಕ್ತಾನೆ. ‘ಪಾಪ ಮರಿಸ್ವಾಮಿ, ಅಯ್ಯೋ ನಮ್ಮ ಹಣೆಬರಹ ಇಷ್ಟೇ ಅಂತ ಎದ್ದು ಬರ್ತಾರೆ.“
‘ಆಮೇಲೆ ಇನ್ನೊಮ್ಮೆ ಇನ್ನೊಂದು ಮೇಲುಜಾತಿಯ ಅವರ ಸಹೋಧ್ಯೋಗಿ ಗೆಳೆಯರೊಬ್ಬರು ಅವರನ್ನ ಮನೆಗೆ ಊಟಕ್ಕೆ ಕರ್ಕೊಂಡು ಹೋಗ್ತಾರೆ. ಹಜಾರದಲ್ಲಿ ಎಲೆ ಹಾಕಿ ಊಟಕ್ಕೆ ಬಡಿಸ್ತಾರೆ. ಊಟಮಾಡಿದ ಮೇಲೆ ಅವ್ರಿಗೆ ಒಂದು ಅನುಮಾನ ಬರುತ್ತೆ. ಎಲೆ ಎತ್ಬೇಕೋ ಬೇಡವೋ ಅಂತಸುಮ್ನೆ ನೋಡ್ತಿರ್ತಾರೆ. ಅದಕ್ಕೆ ಆ ಮೇಷ್ಟ್ರ ಅಣ್ಣ,‘ ರೀ ಮೇಷ್ಟ್ರೇ, ನಿಮಗೆ ಊಟ ಹಾಕೋದಲ್ದೇನೇ ಎಲೇನೂ ಎತ್ಬೇಕೇ? ತಗೊಂಡು ಎದ್ದೇಳಯ್ಯಾ’ಅಂತ ಬಹುವಚನದಲ್ಲಿ ಶುರು ಮಾಡಿ ಏಕವಚನದಲ್ಲಿ ಮುಗಿಸ್ತಾರೆ.
“ಆಮೇಲೆ ಮರಿಸ್ವಾಮಿಯವರು ಚಿಕ್ಕಮಗಳೂರಿಗೆ ಬರ್ತಾರೆ. ಅಲ್ಲಿ ಡಿ ಎಸ್ ಎಸ್, ತೇಜಸ್ವಿ, ಆರೆಸ್ಸೆಸ್ ಹೀಗೆ ಎಲ್ರೂ ಪರಿಚಯ ಆಗ್ತಾರೆ. ಎಲ್ರೂ ಸಮಾನರು ಅಂತಾರಲ್ಲಾ ಅಂತ ಆರೆಸ್ಸೆಸ್ಸಿಗೂ ಸೇರ್ತಾರೆ.
ಅದ್ರೆ ಎಲ್ರೂ ಸಮಾನ ಅನ್ನೋವವರು ಸುಳ್ಳು ಹೇಳ್ತಿದಾರೆ ಅಂತ ಗೊತ್ತಾದಾಗ ಅಲ್ಲಿಂದ್ಲೂ ವಾಪಾಸು ಬರ್ತಾರೆ.
‘ಅಂಬೇಡ್ಕರ್ ಪುಸ್ತಕ ಓದ್ತಾರೆ,
ಕೊನೆಗೆ ಅವರು ಒಂದು ಮಾತು ಹೇಳ್ತಾರೆ ‘ಆವಾಗ್ಲೆ ನಂಗೆ ಅಸ್ಪ್ರಶ್ಯತೆ ಅಂದ್ರೆ ಗಾಯಾಂತ ಗೊತ್ತಾಗಿದ್ದು’ ಅಂತ. ‘ಅಲ್ಲಿವರೆಗೂ ನಂಗೆ ಗಾಯ ಗಾಯ ಅಂತಾನೇ ಅನಿಸ್ತಿರಲಿಲ್ಲ ಅಂತ ಹೇಳ್ತಾರೆ. ಅಂಬೇಡ್ಕರ್ ರನ್ನು ಓದುವವರೆಗೆ ಅವರು ಅದನ್ನ ಹಣೆಯ ಬರಹ ಅಂತ ಅಂದ್ಕೊಂಡಿದ್ರು.’
-ದೇವನೂರ ಮಹಾದೇವ