ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ; ನನ್ನ ಬರವಣಿಗೆ ಮೇಲೆ ಯಾರೂಕೇಸ್ ಹಾಕಿಲ್ಲ! ಪ್ರೊ. ಭಗವಾನ್
ಸಂದರ್ಶಕ : ವಿಶ್ವಾರಾಧ್ಯ ಸತ್ಯಂಪೇಟೆ

ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ ;
ನನ್ನ ಬರವಣಿಗೆ ಮೇಲೆ ಯಾರೂಕೇಸ್ ಹಾಕಿಲ್ಲ! ಪ್ರೊ. ಭಗವಾನ್
ಪ್ರೊ.ಕೆ.ಎಸ್.ಭಗವಾನ್ ಹಲವರಿಗೆ ಬಿಸಿ ತುಪ್ಪ. ಆದರೆ ಚಿಂತಕರಿಗೆ, ವಿವೇಚನೆಯುಳ್ಳ ಜನರಿಗೆ ಸಮಾಜದಲ್ಲಿ ಬಿದ್ದಿರುವ ವೈದಿಕ ಕಸ ಸುಡಬೇಕೆನ್ನುವಉತ್ಸಾಹ ಉಳ್ಳವರಿಗೆ, ಚೈತನ್ಯದ ಚಿಲುಮೆ. ಮತ ಭ್ರಾಂತಿಯಲಿ ್ಲಓಲಾಡುವ, ಯಾರ ವಿಚಾರಗಳನ್ನೂ ಕಿವಿಗೆ ಹಾಕಿಕೊಳ್ಳುವ ಮನಸ್ಥಿತಿ ಇಲ್ಲದ ಯುವಕ ಯುವತಿಯರಿಗೆ ಭಗವಾನ್ ಒಬ ್ಬಧರ್ಮ ವಿರೋಧಿ. ತೀರಾ ಇತ್ತೀಚೆಗೆ ಮೀರಾ ರಾಘವೇಂದ್ರ ಎಂಬ ಅರೆಬೆಂದ ವಕೀಲೆ ತಮ್ಮ ವಕೀಲೆತನದ ಘನ ಗಾಂಭರ್ಯವನ್ನು ಮರೆತು ಅವರ ಮುಖಕ್ಕೆ ಮಸಿ ಬಳಿದದ್ದು, ಅದನ್ನು ತಾವೇ ಸ್ವತಃ ಸಮರ್ಥಿಸಿಕೊಂಡದ್ದು ನಾಡಿನ ಜನತೆ ನೋಡಿ ಆಗಿದೆ. ಪ್ರಜಾಪ್ರಭುತ್ವ ನಿಂತಿರುವುದೇ ಸಂವಿಧಾನದ ಮೇಲೆ. ಸಂವಿಧಾನದ ಆಶಯಗಳನ್ನು ಜಾರಿಗೆತರುವ ಜವಬ್ದಾರಿ ಹಾಗೂ ಹೊಣೆ ಇರುವ ವಕೀಲೆಯೇ ದುಷ್ಟವಾಗಿ ವರ್ತಿಸಿ ನ್ಯಾಯಾಂಗಕ್ಕೂ ಕಪ್ಪು ಮಸಿ ಬಳಿಯುವಂತಹ ಹೀನ ಕೆಲಸಕ್ಕೆ ಕೈ ಹಾಕಿದಳು.
ಈ ಸಂದರ್ಭದಲ್ಲಿಯಾದರೂ ಪ್ರೊ.ಭಗವಾನ್ಅವರ ಚಿಂತನೆಗಳನ್ನು ಕುರಿತು ನ್ಯಾಯ ಸಮ್ಮತವಾಗಿ ಮಾತನಾಡಬೇಕಿದ್ದ ದೃಶ್ಯ ಮಾಧ್ಯಮಗಳು ಪುರೋಹಿತರ ಊಳಿಗತನಕ್ಕೆ ನಿಂತುಕೊAಡAತೆ ವರ್ತಿಸಿದವೇ ಹೊರತು, ಅಸಲಿ ಸತ್ಯ ಏನು?ಎಂಬುದನ್ನು ಜನ ಸಾಮಾನ್ಯರಿಗೆ ತೋರಿಸಿಕೊಡಲಿಲ್ಲ. ಬದಲಾಗಿ ತಮ್ಮ ಬ್ರಾಹ್ಮಣ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಕೊತಕೊತನೆ ಕುದ್ದು ಹೋದವು.
ಗೂಗೆ ಕಣ್ಣಕಾಣಲರಿಯದೆರವಿಯ ಬಯ್ವದು
ಕಾಗೆ ಕಣ್ಣಕಾಣಲರಿಯದೆ ಶಶಿಯ ಬಯ್ವುದು.
ಕುರುಡಕಣ್ಣಕಾಣಲರಿಯದೆಕನ್ನಡಿಯ ಬಯ್ವನು.
ಇವರ ಮಾತೆಲ್ಲವೂ ಸಹಜವೆ
ನರಕ ಸಂಸಾರದಲ್ಲಿ ಹೊದಕುಳಿಗೊಳುತ್ತ
ಶಿವನಿಲ್ಲ ಮುಕ್ತಿಯಿಲ್ಲ, ಹುಸಿಯೆಂದಡೆ
ನರಕದಲ್ಲಿಕ್ಕದೆ ಬಿಡುವನೆಚೆನ್ನಮಲ್ಲಿಕಾರ್ಜುನ?
ರಾಜ್ಯದ ಕೆಲವು ಕಡೆ ಭಗವಾನ್ ವಿಚಾರದ ಪರವಾದಅಲೆಯನ್ನು ಅವು ಗಮನಿಸಲಿಲ್ಲ. ಪ್ರೊ. ಭಗವಾನ್ ಹಾಗೂ ನನ್ನತಂದೆಗೂತುAಬಾಆತ್ಮೀಯ ಸಂಬAಧ.ಎತ್ತಣ ಮಾಮರಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬAಧವಯ್ಯಾ ?ಎಂದಿದ್ದರೂ ಬೆಟ್ಟದ ನೆಲ್ಲಿಕಾಯಿ ಸಮುದ್ರಉಪ್ಪಿಗೂಇರುವ ನಂಟಿನAತೆ ಬೆಸೆದುಕೊಂಡಿತ್ತು.ಅಪ್ಪ ಲಿಂಗಣ್ಣ ಸತ್ಯಂಪೇಟೆ ಸಂಪಾದಿಸಿ ಪ್ರಕಟಿಸುತ್ತಿದ್ದ ಬಸವಮಾರ್ಗಕ್ಕೆ, ಅಗ್ನಿಅಂಕುರ ಪತ್ರಿಕೆಗೆ ಭಗವಾನ್ಲೇಖನ ಬರೆಯುತ್ತಿದ್ದರು. ಗಂಟೆಗಟ್ಟಲೆ ಮಾತನಾಡುತ್ತಿದ್ದರು. ನನ್ನ ಮನೆಯ ಪುಸ್ತಕಾಲಯದಲ್ಲಿದ್ದ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ ಎಂಬ ಪುಸ್ತಕ ಓದುತ್ತಓದುತ್ತ ನನ್ನೊಳಗೆ ಅಡಗಿದ್ದ ವೈಚಾರಿಕ ಚಿಂತಕ ಇಣಕಿ ನೋಡಲು ಆರಂಭಿಸಿದ.

ಪ್ರೊ.ಭಗವಾನಅವರೊಂದಿಗೆ ನಡೆಸಿದ ಸಂದರ್ಶನವನ್ನು ನಿಮ್ಮ ಅವಗಾಹನೆಗೆ ಹಾಗೂ ಮುಕ್ತವಾದ ಚರ್ಚೆಗೆ ನಾನಿಲ್ಲಿ ಸಂಗ್ರಹಿಸಿ ಕೊಟ್ಟಿದ್ದೇನೆ.
ಸತ್ಯಂಪೇಟೆ : ನಿಮ್ಮನ್ನು ವಿವಾದಾತ್ಮಕ ಲೇಖಕ ಎಂದು ಮಾಧ್ಯಮಗಳು ಹೇಳುತ್ತವಲ್ಲ,ಯಾಕೆ ?
ಭಗವಾನ್ : ಕೆಲವು ಮಾಧ್ಯಮಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಉದ್ದೇಶ ಪೂರ್ವಕವಾಗಿ ತಪ್ಪು ತಪ್ಪು ವರದಿ ಮಾಡುತ್ತವೆ. ಇಂಥ ವರದಿಯ ಹಿಂದಿನ ಉದ್ದೇಶ ಜನ ನನ್ನ ಬಗ್ಗೆ ಕೆಟ್ಟ ಭಾವನೆಗಳನ್ನು ಬೆಳೆಸಿಕೊಳ್ಳಲಿ, ನನ್ನ ವಿರುದ್ಧ ಗುಂಪು ಕಟ್ಟಿಕೊಳ್ಳಲಿ , ಹೋರಾಟ ಮಾಡಲಿ ಎಂಬ ಕೆಟ್ಟ ಆಲೋಚನೆ ಅವರಲ್ಲಿರುವಂತೆಕಾಣುತ್ತದೆ.
ಸತ್ಯಂಪೇಟೆ : ನಿಮ್ಮ ಬಗ್ಗೆ ಜನ ಮಾನಸದಲ್ಲಿ ಕೆಟ್ಟ ಆಲೋಚನೆ ಬರುವಂತೆ ಮಾಡುವ ಮಾಧ್ಯಮಗಳ ಹುನ್ನಾರದ ಹಿಂದೆ ಇರಬಹುದಾದ ಉದ್ದೇಶವಾದರೂ ಏನಿರಬಹುದು?
ಭಗವಾನ್ :ಯಾವುದನ್ನು ಅವರು ಧರ್ಮ ಅಂತ ತಿಳಿದುಕೊಂಡಿದ್ದಾರೊ, ಆ ಧರ್ಮ ಸಾಮಾನ್ಯ ಜನರಿಗೆ (ಅಂದ್ರೆದುಡಿಯುವ) ವಿರುದ್ಧವಾಗಿದೆ. ಅವರನ್ನು ಅವರು ಶೂದ್ರ ಅಂತ ಕರೆದರು. ಶೂದ್ರ ಎಂಬ ಪದ ತುಂಬಾ ಅವಮಾನಕರವಾದುದು.ಏಕೆಂದರೆ ಮನುಸ್ಮೃತಿಯಲ್ಲಿ‘ದಾಸ್ಯಂ ಶೂದ್ರಂ ದ್ವಿಜನ್ಮನಾಂ’ ಅಂದ್ರೆ ಎಲ್ಲಾ ಶೂದ್ರರು ಬ್ರಾಹ್ಮಣರಗುಲಾಮರು ಅಂತ ಹೇಳಲಾಗಿದೆ.ಇದನ್ನು ನಾವುಗಳೆಲ್ಲ ಗೌರವಯುತವಾದುದು ಅಂತ ಹೇಗೆ ಭಾವಿಸಬೇಕು? ಅದು ಅವರಿಗೆ ಅರ್ಥವಾಗಬೇಕು.
ಸತ್ಯಂಪೇಟೆ: ತಾವು ಯಾರ ಬಗ್ಗೆ ಕಾಳಜಿಗಳನ್ನು ಇಟ್ಟುಕೊಂಡು ಹೇಳಲು ಬಯಸುತ್ತೀರೋ ಅದೇ ಜನಾಂಗವೇ ನಿಮ್ಮ ವಿರುದ್ಧ ಪ್ರತಿಭಟಿಸುತ್ತಿದ್ದಾರಲ್ಲ ! ?
ಭಗವಾನ್ :ಅವರಿಗೆ ಇತಿಹಾಸ ಏನು ಎಂಬುದು ಸದ್ಯ ಗೊತ್ತಿಲ್ಲ. ಗೊತ್ತಿಲ್ಲದಿರುವ ಜನರಿಗೆ ನಾವು ಬಿಡಿಸಿ ಹೇಳಬೇಕಿದೆ. ನಮ್ಮ ಜನ ಒಗ್ಗಟ್ಟಾಗಿಲ್ಲ, ಪ್ರಜ್ಞಾವಂತರಾಗಿಲ್ಲ. ಪಟ್ಟಭದ್ರಶಕ್ತಿಗಳ ಕುತಂತ್ರಗಳೆಲ್ಲ ಅವರಿಗೆ ತಿಳಿದರೆ ಖಂಡಿತವಾಗಿಯೂ ಅವರು ವಿಚಾರಗಳ ಪರವಾಗಿ ಇರ್ತಾರೆ.
ಸತ್ಯಂಪೇಟೆ : ಜನರಿಗೆ ಸರಿಯಾದ ಇತಿಹಾಸಗೊತ್ತಿಲ್ಲ, ಪಟ್ಟಭದ್ರರು ಈ ಜನಗಳನ್ನು ಇಟ್ಟುಕೊಂಡು ಆಟ ಆಡ್ತಾರೆ.ಇಂಥ ಸಂದರ್ಭದಲ್ಲಿತಾವು…?
ಭಗವಾನ್ : ಸಂವಿಧಾನದಲ್ಲಿ ೫೧ ಎಚ್. ಎ. ಯಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಿಚಾರವಾದವನ್ನು ಹರಡುವುದು. ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಸಮಾಜ ಸುಧಾರಣೆಯನ್ನು ತರುವುದು ಮತ್ತು ಮಾನವತಾವಾದವನ್ನು ಬೆಳೆಸುವುದು ಎಂಬುದಾಗಿದೆ. ಇದನ್ನು ನಾನು ನನ್ನ‘ರಾಮಮಂದಿರ ಏಕೆ ಬೇಡ’ ಪುಸ್ತಕದ ಪ್ರಾರಂಭದಲ್ಲಿ ಕೊಟ್ಟಿದ್ದೇನೆ. ಆದ್ದರಿಂದ ನಾನು ಪ್ರಜ್ಞಾವಂತ ಪ್ರಜೆಯಾಗಿ ಸಂವಿಧಾನ ವಿಧಿಸಿರುವ ಕರ್ತವ್ಯದಂತೆನನ್ನ ಕೆಲಸ ನಾನು ಮಾಡುತ್ತಿರುವೆ.
ಸತ್ಯಂಪೇಟೆ : ನಿಮ್ಮ ಬರವಣಿಗೆ ವಿಚಾರಗಳೆಲ್ಲ ಧರ್ಮ ವಿರೋಧಿಗಳೆಂಬಂತೆ ಮಾಧ್ಯಮಗಳು ಹಾಗೂ ಕೆಲವು ಪಟ್ಟಭದ್ರರು ಸಮಾಜದಲ್ಲಿ ಬಿಂಬಿಸುತ್ತಿದ್ದಾರಲ್ಲ ?
ಭಗವಾನ್ :ಖಂಡಿತವಾಗಿಯೂ ಇಲ್ಲ. ನನ್ನ ಬರವಣಿಗೆಯ ಮೇಲೆ ಯಾರೂ ಕೇಸ್ ಹಾಕಿಲ್ಲ. ಯಾಕೆಂದರೆ ನನ್ನೆಲ್ಲ ಬರವಣಿಗೆಗೂ ದಾಖಲೆ ಇದೆ. ನಾನು ಯಾವ ಧರ್ಮದ ವಿರೋಧಿಯೂ ಅಲ್ಲ. ಮತಗಳನ್ನು ಖಂಡಿಸಿದ್ದೇನೇ ಹೊರತು ಧರ್ಮವನಲ್ಲ.
ಸತ್ಯಂಪೇಟೆ : ಪದೇ ಪದೇ ನಿಮ್ಮನ್ನು ಗುರಿಯಾಗಿಟ್ಟುಕೊಂಡು ಪಟ್ಟಭದ್ರರು ಸಂಘಟಿತ ಹೋರಾಟಕ್ಕೆ ನಿಲ್ಲುತ್ತಾರಲ್ಲ, ಇದರಿಂದ ನಿಮಗೆ ಮಾನಸಿಕವಾಗಿ ಕಿರುಕುಳವಾಗಿಲ್ಲವೆ?
ಭಗವಾನ್ : ಇಲ್ಲ, ಇದು ನನಗೆ ಸಾಮಾನ್ಯ. ೧೯೮೨ ರಿಂದ ಇಂಥವುಗಳಿಗೆ ತುತ್ತಾಗಿದ್ದೇನೆ. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿದೆ.ಈಗ ಅದರ ಇಪ್ಪತ್ತನೆಯ ಮುದ್ರಣ ಮುಗಿಯುತ್ತಿದೆ. ಅನೇಕ ಭಾಷೆಗಳಿಗೂ ಅನುವಾದಗೊಂಡಿದೆ.ಆಗಲೂ ಇದೆರೀತಿ ಹಲ್ಲೆ, ವಿರೋಧಗಳು ಬಂದ್ವು.ಆದ್ರೆ ನನ್ನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ಮೂಲ ಸಂಸ್ಕೃತ ಬರವಣಿಗೆಯ ಉಲ್ಲೇಖ ಮತ್ತು ನನ್ನ ವ್ಯಾಖ್ಯಾನಕೊಟ್ಟಿದ್ದೇನೆ. ಈಗಲೂ ನಾನು ರಾಮ ಮಂದಿರ – ಏಕೆ ಬೇಡ ?ಎಂಬ ಪುಸ್ತಕದಲ್ಲಿ ಸಹ, ಜನರು ರಾಮನ ಬಗೆಗೆ ಏನೇನೋ ಭಾವನೆಇಟ್ಟುಕೊಂಡಿರಬಹುದು.ಆದ್ರೆ ಮೂಲ ವಾಲ್ಮೀಕಿರಾಮಾಯಣದಲ್ಲಿ ಆ ರೀತಿಯ ಭಾವನೆಗಳಿಗೆ ಅವಕಾಶವಿಲ್ಲ. ಆದ್ದರಿಂದ ನಾನು ಮೂಲ ವಾಲ್ಮೀಕಿ ರಾಮಾಯಣದಲ್ಲಿನ ಶ್ಲೋಕಗಳನ್ನು, ಖಂಡಗಳನ್ನು ದಾಖಲೆ ಮಾಡಿ ವ್ಯಾಖ್ಯಾನ ಮಾಡಿಕೊಟ್ಟಿದ್ದೇನೆ.
ಇವತ್ತಿಗೂ ಈ ಕೃತಿಯ ತಪ್ಪುಗಳ ಕುರಿತುಖಚಿತವಾಗಿ ಯಾರೊಬ್ಬರೂ ಹೇಳಿಲ್ಲ. ಆದ್ರೆಜನರಿಗೆ ಮನರಂಜನೆ ಒದಗಿಸಲೋ ಅಥವಾ ತಮ್ಮ ಬಾಯಿ ಚಟಕ್ಕೊ ಸುಖಾ ಸುಮ್ಮನೆ ಸಮಾಜದಲ್ಲಿ ಗೊಂದಲ ಉಂಟು ಮಾಡಿಜನರಿಗೆ ಸತ್ಯ ತಿಳಿಯದಂತೆ ನೋಡಿಕೊಳ್ಳುತ್ತಿದ್ದಾರೆ.
ನಿಮಗೆ ಇಷ್ಟವಾದರೆ ಓದಿ, ಇಷ್ಟವಾಗದಿದ್ದರೆ ಬಿಟ್ಟು ಬಿಡಿ
ಸತ್ಯಂಪೇಟೆ : ರಾಮ ಮಂದಿರ – ಏಕೆ ಬೇಡ ? ಎಂಬ ಕೃತಿ ರಚನೆಯ ಆವಶ್ಯಕತೆ ಏನಿತ್ತು?
ಭಗವಾನ್ : ಈ ಪುಸ್ತಕ ನಾನೇ ಬರೆದಿದ್ದರೂ ಇದಕ್ಕೆ ವಾಲ್ಮೀಕಿ ಬರೆದ ರಾಮಾಯಣವೇ ಆಧಾರಗ್ರಂಥ. ಅಲ್ಲಿರುವ೨೪,೦೦೦ ಶ್ಲೋಕಗಳನ್ನು ಮೂರು ವರ್ಷಗಳವರೆಗೆ ಅಧ್ಯಯನ ಮಾಡಿ ಬರೆದಿರುವೆ. ಜನಗಳು ರಾಮನ ಬಗ್ಗೆ ಏನೇನೋ ಅಭಿಪ್ರಾಯಗಳನ್ನು ಇಟ್ಟುಕೊಂಡಿರಬಹುದು.ಅದು ನನಗೆ ಮುಖ್ಯವೂ ಅಲ್ಲ. ಸತ್ಯಾನ್ವೇಷಣೆ ಮುಖ್ಯವಾಗಿರುವುದರಿಂದ ರಾಮನ ಕುರಿತು ವಾಲ್ಮೀಕಿ ಹೇಳಿದ ಮಾತುಗಳನ್ನು ಯಥಾವತ್ತಾಗಿ ಬರೆದಿದ್ದೇನೆ. ಚಾರಿತ್ರö್ಯಹೀನ ರಾಮನಿಗೂ ಮಂದಿರಬೇಕೆ? ಎಂಬುದು ವಾಲ್ಮೀಕಿ ರಾಮಾಯದ ಶ್ಲೋಕಅಧ್ಯಯನ ಮಾಡಿದ ಯಾರಿಗೇ ಆದರೂ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಜನರ ಮನಸ್ಸನಲ್ಲಿ ರಾಮನ ಬಗ್ಗೆ ಕವಿದಿರುವ ಕತ್ತಲನ್ನು ಕಳೆಯುವ ಯತ್ನವನ್ನು ನಾನು ಮಾಡಿದ್ದೇನೆ. ೨೦೧೮ ರಲ್ಲಿ ಈ ಪುಸ್ತಕ ಪ್ರಕಟವಾಗಿ ಈಗಾಗಲೇ ಒಂದೇ ವರ್ಷದಲ್ಲಿ ಮೂರು ಮುದ್ರಣಗಳನ್ನು ಕಂಡಿದೆ. ಮಲಯಾಳಂ, ಮರಾಠಿ ಇತರ ಭಾಷೆಗಳಿಗೂ ಅನುವಾದ ಆಗಿದೆ. ಮಲೆಯಾಳಿ ಅನುವಾದ ಪ್ರಕಟವಾಗಿ ಚನ್ನಾಗಿ ಮಾರಾಟವಾಗುತ್ತಾ ಇದೆ ಎಂದು ಅಲ್ಲಿನ ಪ್ರಕಾಶಕರು ತಿಳಿಸಿದ್ದಾರೆ.
ಸತ್ಯಂಪೇಟೆ :ಯಾರಾದರೂ ಈ ಕೃತಿಯ ಬಗ್ಗೆ ಟೀಕೆ ಟಿಪ್ಪಣೆ ಬರೆದಿದ್ದಾರೆಯೆ?
ಭಗವಾನ್ : ರಾಮ ಮಂದಿರ ಏಕೆ ಬೇಡ? ಎಂಬ ಕೃತಿಯಕುರಿತುಇಲ್ಲಿನ ವಿಷಯತಪ್ಪಿದೆಎಂದುಯಾರೊಬ್ಬರೂ ಬರೆದಿಲ್ಲ. ಕೇವಲ ವಿತಂಡವಾದ ಮಾಡುತ್ತಿದ್ದಾರೆ.ಪುರಾಣಗಳನ್ನೊಮ್ಮೆ ನೋಡಿದರೆ ಇದು ಗೊತ್ತಾಗುತ್ತದೆ. ದೇವತೆಗಳು ವಾದ ಮಾಡುತ್ತಾರೆ.ಅವರ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳುತ್ತಾರೆ.ಮೃಗಗಳಿಗೆ ಮಾತು ಬರುವುದಿಲ್ಲ. ಅವು ಗುದ್ದಾಡುತ್ತವೆ. ಮನುಷ್ಯ ವಾದಿಸುತ್ತಾನೆ. ಸೋತರೆ ಈ ವಕೀಲೆಯಂತಾಗುತ್ತಾನೆ.

ಸತ್ಯಂಪೇಟೆ : ಇಂದು ರಾಷ್ಟçದ ತುಂಬಾ ಪಟ್ಟಭದ್ರ ಹಿತಾಸಕ್ತಿಗಳದ್ದೇ ಕಾರುಬಾರು ಎನ್ನುವ ವಾತಾವರಣ ನಿರ್ಮಾಣಗೊಂಡಿದೆ. ಇಂಥ ಸಂದರ್ಭದಲ್ಲಿಯೂ ತಾವು ಯಾವುದೇ ಅಳುಕಿಲ್ಲದೆ ಸತ್ಯ ಪ್ರತಿಪಾದನೆ ಮಾಡುವ ಗುಟ್ಟೇನು?
ಭಗವಾನ್ : ಸುಳ್ಳು ಹೇಳುವವರಿಗೇ ಅಷ್ಟು ಧೈರ್ಯ ಇರಬೇಕಾದರೆ ಸತ್ಯವನ್ನು ಹೇಳುವವನಿಗೆ ಇನ್ನೆಷ್ಟು ಧೈರ್ಯ ಇರಬೇಕು? ಪಟ್ಟಭದ್ರರ ಭಯವಿದ್ದರೆ ನಾನು ಯಾವತ್ತೂ ವಸ್ತುನಿಷ್ಠವಾದ ಪುಸ್ತಕಗಳನ್ನು ಬರೆಯಲು ಹೋಗುತ್ತಿರಲಿಲ್ಲ. ನನಗೆ ಇದರಲ್ಲಿ ಖಚಿತತೆಇದೆ. ಬದ್ಧತೆ ಇದೆ. ಸತ್ಯ ಮನವರಿಕೆ ಇದೆ.
ಸತ್ಯಂಪೇಟೆ : ನಿಮ್ಮ ವಸ್ತು ನಿಷ್ಠ ಬರವಣಿಗೆಯಿಂದ ಕೌಟುಂಬಿಕವಾಗಿ ತೊಂದರೆಯಾಗುತ್ತದಲ್ಲವೆ ?
ಭಗವಾನ್ : ಅಂಥದ್ದೇನೂ ಇಲ್ಲ. ಯಾವತ್ತಿದ್ದರೂ ಒಂದು ದಿನ ಹೋಗುವುದು ಇದ್ದೇ ಇದೆ. ಅತ್ಯುತ್ತಮವಾದ ಸಾವು ಅಂದೆ ್ರಇದ್ದಕ್ಕಿಂದ್ದAತೆ ಹೊರಟು ಹೋಗುವುದು. ಯಾರಿಗೂ ತೊಂದರೆಯಾಗೋದಿಲ್ಲ, ಆಸ್ಪತ್ರೆ ಇತ್ಯಾದಿಗಳ ಕಿರಿ ಕಿರಿ ಇರುವುದಿಲ್ಲ. ದಿಢೀರ ಸಾವು ಅತ್ಯುತ್ತಮ ಸಾವು ಎಂದುಕೊAಡಿರುವೆ. ಇದರಿಂದ ಕುಟುಂಬದವರಿಗೆ ಯಾವ ತೊಂದರೆ ಇಲ್ಲ.
ಸತ್ಯಂಪೇಟೆ : ತೀರಾ ಇತ್ತೀಚೆಗೆ ವಕೀಲೆಯೊಬ್ಬಳು ನಿಮ್ಮ ಮುಖಕ್ಕೆ ಮಸಿ ಬಳಿದಾಗ ಅಧೀರರಾಗಿಬಿಟ್ಟಿರೋ ಹೇಗೆ?
ಭಗವಾನ್ : ಇಲ್ಲ, ಇಲ್ಲ. ಇವೆಲ್ಲ ಮಾಮೂಲು ಅಂದುಕೊAಡೆ. ಆಕೆ ನನ್ನ ಮುಖಕ್ಕೆ ಮಾತ್ರ ಮಸಿ ಬಳಿಯಲಿಲ್ಲ. ನನ್ನ ಮುಖಕ್ಕೆ ಹಚ್ಚುವುದಕ್ಕಿಂತ ಮುಂಚೆಯೆ ತನ್ನ ಕೈಗಳಿಗೆ ಮಸಿ ಬಳಿದುಕೊಂಡಿದ್ದಾಳೆ. ಬಸವಣ್ಣನವರು ಹೇಳುವಂತೆ ಆ ತಾಯಿಯ ಒಡಲೊಳಗಣ ಕಿಚ್ಚು ಒಡಲ ಸುಡುವುದಲ್ಲದೆ ನೆರೆ ಮನೆಯ ಸುಡುವುದೆ? ಎನ್ನುವಂತೆ ಆಕೆಯನ್ನೇ ಅದು ದಹಿಸುತ್ತಿದೆ.
ಏಕೆಂದರೆ ತಾನೊಬ್ಬ ವಕೀಲೆಯಾದರೂ ಕಾನೂನನ್ನು ಕೈಗೆ ತೆಗೆದುಕೊಂಡದ್ದು ತಪ್ಪೆಂದು ಆಕೆಗೂ ಗೊತ್ತಿದೆ. ಶ್ರೀಮತಿ ಮೀರಾ ರಾಘವೇಂದ್ರ ಮೊದಲು ನನ್ನ ವಿರುದ್ಧ ಕಾನೂನು ಸಮರ ಹೂಡಿದಳು, ನನಗೆ ಕೋರ್ಟಜಾಮೀನು ನೀಡಿದಾಗ ಸಹಕರಿಸಬೇಕಿತ್ತು. ಸಹನೆಯಿಂದ ವರ್ತಿಸಬೇಕಿತ್ತು. ನನ್ನ ಮುಖಕ್ಕೆ ಮಸಿ ಬಳಿಯುವ ಮೂಲಕ ನ್ಯಾಯ ವ್ಯವಸ್ಥೆಗೂ, ಸಂವಿಧಾನಕ್ಕೂ ಆಕೆ ಮಸಿ ಬಳಿದಂತಾಗಿದೆ. ತೀರಾ ಕ್ಷÄಲ್ಲಕವಾಗಿ ವರ್ತಿಸಿದಳು.ದೇಶವೇ ಅಲ್ಲದೆ ವಿದೇಶಗಳಲ್ಲಿಯೂ ಇದಕ್ಕೆ ಜನ ತೀವ್ರ ತೆರನಾಗಿ ಖಂಡಿಸಿದ್ದಾರೆ. ಸಮಾಜದ ಹಿತಕ್ಕಾಗಿ ಹೋರಾಟ ನಡೆಸಿರುವ ನನ್ನ ಪರವಾಗಿ ನಿಂತ ಅವರಿಗೆಲ್ಲಾ ನನ್ನ ವಂದನೆಗಳು.
ಸತ್ಯಂಪೇಟೆ : ಬಹುಶಃ ಮೀರಾ ರಾಘವೇಂದ್ರಳ ನಡವಳಿಗೆ ಕಾರಣವೇನಿರಬೇಕು?
ಭಗವಾನ್ : ಆಕೆ ನಂಬಿದ ಮತ ಬಹುಶಃ ಇದನ್ನೆ ಕಲಿಸುತ್ತದೋ ಏನೋ?! ಆಕೆ ಆ ಮತವನ್ನು ಪ್ರತಿನಿಧಿಸಿದ್ದಾಳೆ. ಮನಸ್ಸಿಗೆ ತೋಚಿದಂತೆ ವರ್ತಿಸುವುದು ಮತ. ಮತ ಕಂದಾಚಾರ, ಡಂಬಾಚಾರ.ಧರ್ಮ ವಿಶಾಲವಾದುದು, ವಿಶ್ವ ವಿಶಾಲವಾದುದು.ಧರ್ಮ ಸಕಲ ಜೀವಾತ್ಮರನ್ನು(ಮರಗಿಡ ಪಕ್ಷಿ ಪ್ರಾಣಿ ಪಶು ಮನುಷ್ಯ ನದಿ ನೀರು ಗಾಳಿ ಪ್ರಕೃತಿ) ಪ್ರೀತಿಸಲು, ಗೌರವಿಸಲು ಸಂರಕ್ಷಿಸಲು ಕಲಿಸುತ್ತದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಅನುಚಿತವಾಗಿ ಆಕೆ ವರ್ತಿಸಿರಬೇಕು.ಸಂಬಂಧ ಪಟ್ಟವರು ಆಕೆಗೆ ಮಾನಸಿಕ ಚಿಕಿತ್ಸೆಕೊಡಿಸುವುದು ಒಳ್ಳೆಯದು.
ಸತ್ಯಂಪೇಟೆ :‘ಶಂಕರಾಚಾರ್ಯಮತ್ತುಪ್ರತಿಗಾಮಿತನ’ ಪುಸ್ತಕ ತಾವು ಬರೆದಾಗಲೂಇಂಥ ಘಟನೆಗಳೇನಾದರೂ ನಡೆದಿದ್ದವೆ?
ಭಗವಾನ್ : ಹೌದು, ಆಗಲೂ ಪೊಲೀಸ್ ಕೇಸ್ ಆಗಿತ್ತು. ವಿಧಾನ ಸಭೆಯಲ್ಲಿ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಕುರಿತು ಬಹುದೊಡ್ಡ ಚರ್ಚೆಯಾಯಿತು. ಆಗ ವಿರೇಂದ್ರ ಪಾಟೀಲ ಸರಕಾರ ಇತ್ತು. ರೆಡ್ಡಿ ಅಂತಒಬ್ಬಎA.ಎಲ್.ಎ. ಅವರ ಪೂರ್ತಿ ಹೆಸರು ನನಗೆ ನೆನಪಾಗುತ್ತಿಲ್ಲ. (ಸಿ.ಪಿ.ಎಂ ಪಕ್ಷದ ಸದಸ್ಯರು)ಇದ್ರು. ತುಂಬಾ ಕಟುವಾಗಿ ಸರಕಾರದ ನಡೆಯನ್ನು ಖಂಡಿಸಿದರು.ಆಗ ಸರಕಾರವೇ ಕೇಸನ್ನು ವಾಪಸ್ ಪಡೆಯಿತು.ನನ್ನ ಮೇಲೆ ಇದುವರೆಗೆ ಏಳೆಂಟು ಕೇಸುಗಳಾಗಿದ್ದರೂ ಯಾವ ಕೇಸ್ನಲ್ಲೂ ನನ್ನ ಬರವಣಿಗೆಯನ್ನು ತಪ್ಪು ಎಂದು ತೀರ್ಪು ನೀಡಿಲ್ಲ. ಎಲ್ಲವೂ ಡಿಸಮಿಸ್ ಆಗಿವೆ.
ಸತ್ಯಂಪೇಟೆ : ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಬಯಕೆ ಪ್ರೊ. ಕೆ.ಎಸ್. ಭಗವಾನರಿಗೆ ಇದೆ ಎಂದು ಕೆಲವರು ಆರೋಪಿಸುತ್ತಾರಲ್ಲ?!
ಭಗವಾನ್ : ನಾನು ಸದಾ ಅಧ್ಯಯನ ಮಾಡುವವನು. ವಾಲ್ಮೀಕಿ ರಾಮಾಯಣ ಸಂಪೂರ್ಣವಾಗಿ ಓದಿದೆ.ಇಪ್ಪತ್ನಾಲ್ಕು ಸಾವಿರ ಶ್ಲೋಕ ಓದಿ ಅರಿತ ಮೇಲೆ ಅವುಗಳ ಬಗ್ಗೆ ಬರೆಯಬೇಕೆನಿಸಿತು.ಜನರು ತಿಳಿದುಕೊಂಡಿರುವುದೇ ಒಂದು, ವಾಲ್ಮೀಕಿ ರಾಮಾಯಣದಲ್ಲಿ ಇರುವುದೇ ಮತ್ತೊಂದು ಎಂದು ಅನಿಸಿತು. ಇದುವರೆಗೆ ಕತೆ ಕೊಟ್ಟಿರುವುದೆಲ್ಲ ಸಾಮಾನ್ಯ, ಹಾಗೂ ಎಲ್ಲರೂ ಒಪ್ಪುವಂಥದ್ದು ಮಾತ್ರ ಬರೆದಿದ್ದಾರಲ್ಲ ಎಂದು ಅನಿಸಿತು. ನಿಜವಾಗಿಯೂ ರಾಮ ಹೀಗೆ ಇಲ್ಲವಲ್ಲ! ಎಂದೆನಿಸಿತು.
ಏನೆಲ್ಲ ಅವಾಂತರ ಮಾಡಿದ ರಾಮ ಹೇಗೆ ಆದರ್ಶ ಪುರುಷನಾಗುತ್ತಾನೆ? ಹೇಗೆ ಉತ್ತಮ ರಾಜನಾಗುತ್ತಾನೆ? ಹೇಗೆ ಉತ್ತಮ ಸಹೋದರನಾಗುತ್ತಾನೆ? ಹೇಗೆ ಉತ್ತಮ ಪತಿಯಾಗುತ್ತಾನೆ? ಒಬ್ಬ ಆದರ್ಶ ಮನುಷ್ಯ ತಾನೇ ಹೇಗೆ? ಎಂದು ವಿಶ್ಲೇಷಣೆ ಮಾಡಿದ್ದೇನೆ.
ಸತ್ಯಂಪೇಟೆ : ಸರ್, ವಾಲ್ಮೀಕಿ ಬರೆದ ರಾಮಾಯಣವೆ ನಿಮ್ಮ ಕೃತಿಗೆ ಆಧಾರವೆಂದು ಹೇಳುತ್ತೀರಲ್ಲ! ಹಾಗಾದರೆ ಈ ಕೃತಿಯನ್ನು ವಾಲ್ಮೀಕಿಯೆ ಬರೆದಿರಬಹುದೆ?
ಭಗವಾನ್ : ಗೊತ್ತಿಲ್ಲ. ವಾಲ್ಮೀಕಿ ಹೆಸರಿನಲ್ಲಿ ಅದು ಪ್ರಚಾರದಲ್ಲಿದೆ. ವಾಲ್ಮೀಕಿ ಜನಾಂಗ ಮುಗ್ಧರು-ಅವರಿಗೆ ಏನೂ ಗೊತ್ತಿಲ್ಲ. ವಾಲ್ಮೀಕಿ ಹೆಸರಿನಲ್ಲಿ ಈ ಸುಳ್ಳು ಸೊಟ್ಟುಗಳನ್ನು ಯಾರಾದರೂ ಬರೆದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಸತ್ಯಂಪೇಟೆ : ಈ ವಾಲ್ಮೀಕಿ ಬೇಡ ಎಂದು ಬಹುತೇಕರು ತಿಳಿದುಕೊಂಡಿದ್ದಾರೆ ! ವಾಲ್ಮೀಕಿ ಬರೆದ ರಾಮಾಯಣ ಶ್ಲೋಕದಲ್ಲಿ ಎಲ್ಲಿಯಾದರೂ ಆತನ ಮತದ ಬಗ್ಗೆ ಉಲ್ಲೇಖವಿದೆಯೆ?
ಭಗವಾನ್ : ಬಹಳಷ್ಟು ಜನ ತಿಳಿದುಕೊಂಡಿದ್ದೇ ಸರಿಎಂದು ಹೇಳಲಿಕ್ಕೆ ಆಗುವುದಿಲ್ಲ. ಪ್ರಚೇತನ, ಭಾರ್ಗವ ಎಂಬ ಎರಡು ಹೆಸರುಗಳು ಉಂಟು. ಇವು ಬೇಡ ಜನಾಂಗದವರ ಹೆಸರುಗಳಲ್ಲ. ಪ್ರಸ್ತುತ ಕೃತಿಯಲ್ಲಿ ವಾಲ್ಮೀಕಿ ಬೇಡ ಎಂದು ಎಲ್ಲೂ ಹೇಳುವುದಿಲ್ಲ. ಅವನು ಒಬ್ಬ ಬ್ರಾಹ್ಮಣ ಎನ್ನುವ ರೀತಿಯಲ್ಲಿ ಇದೆ.ಇದನ್ನು ನಾನು ನನ್ನ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದೇನೆ. ನಮ್ಮ ವಿದ್ವಾಂಸರು ಎಂಥ ಮೋಸಗಾರರೆಂದರೆ ತಮ್ಮ ಹಿಕಮತ್ತನ್ನು ಮುಂದುವರೆಸಲು ಬೇರೆಯವರ ಹೆಸರಿನ ಮೇಲೆ ಬರೆದು ಬಿಡುವುದು. ಇದು ತಂತ್ರವಲ್ಲ, ಕುತಂತ್ರ.
ರಾಮ ಮತ್ತು ಕೃಷ್ಣನದು ಅವತಾರ ಎಂದು ಹೇಳುತ್ತಾರೆ.ಇಬ್ಬರೂ ಕ್ಷತ್ರಿಯ ಅಂತಾರೆ.ಹಾಗಾದರೆ ಕ್ಷತ್ರಿಯರು ಯಾರಾದರೂ ತಮಗಿಂತ ಮೇಲೆ ಬ್ರಾಹ್ಮಣರು ಎಂದು ಹೇಳಿಕೊಳ್ಳಲು ಸಾಧ್ಯವೆ? ಕೃಷ್ಣ ಚಾತುರ್ವಣವನ್ನು ನಾನೇ ಸೃಷ್ಟಿ ಮಾಡಿದೆ ಅಂತ ಹೇಳುತ್ತಾನೆ. ಕೃಷ್ಣ ಒಬ್ಬ ಗೊಲ್ಲ. ವರ್ಣಾಶ್ರಮದ ಪ್ರಕಾರ ಆತ ಶೂದ್ರ. ಹಾಗಾದರೆ ಕೃಷ್ಣನೇ ನಾನು ಕೀಳು ಕುಲದವನು ಎಂದು ಹೇಳಲು ಸಾಧ್ಯವೇ? ಇದೆಲ್ಲ ಅವರ ಸುಳ್ಳು ಸೃಷ್ಟಿಗಳು ಮಾತ್ರ. ಇದನ್ನು ಜನರು ಅರಿತುಕೊಂಡು ತಮಗೆ ತಾವೇ ಸತ್ಯವನ್ನು ಅರಿತು ಅಪಾಯಕಾರಿ ಚಿಂತನೆಗಳನ್ನು ಬಿಟ್ಟು ಹೊರಬರಬೇಕು.“ವೇದಕ್ಕೆ ಒರೆಯಕಟ್ಟುವೆ, ಶಾಸ್ತçಕ್ಕೆ ನಿಗಳವನಿಕ್ಕುವೆ. ತರ್ಕದ ಬೆನ್ನ ಬಾರನೆತ್ತುವೆ”ಎಂದು ಬಸವಣ್ಣನವರು ಹೇಳಿದ್ದಾರಲ್ಲ ಇದನ್ನು ಅರಿತುಕೊಂಡು ಜನಗಳು ಪ್ರಜ್ಞಾವಂತರಾಗಬೇಕು.
ನನ್ನನ್ನು ಟೀಕಿಸಿ ಪರವಾಯಿಲ್ಲ. ಟೀಕಿಸುವದಕ್ಕಿಂತ ಮುಂಚೆ ನಾನು ಬರೆದ ಪುಸ್ತಕಗಳನ್ನು ಸರಿಯಾಗಿ ಓದಿಕೊಳ್ಳಿರಿ.ಆಗಲೂ ನನ್ನನ್ನು ಟೀಕಿಸಬೇಕು, ಬೈಯಬೇಕು ಎಂದಿದ್ದರೆ ಬೈಯಿರಿ.ಯಾರೂ ಈ ಕೆಲಸ ಮಾಡಾ ್ತಇಲ್ಲ. ಅದ್ಕೆ ಓದದೆ ಬಯ್ಯಲು ಶುರು ಮಾಡಿದ್ದಾರೆ. ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸಂವಿಧಾನವೇ ನಮ್ಮ ರಾಷ್ಟçದ ಧರ್ಮಗ್ರಂಥ ಎಂದು ಹೇಳಿದ್ದಾರೆ. ಪ್ರಧಾನಿಗಳ ಮಾತನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ. ಬೇರಾವುದೂ ನಮ್ಮ ಧರ್ಮ ಗ್ರಂಥ ಅಲ್ಲ.
ಸತ್ಯಂಪೇಟೆ : ರಾಮ ಕೃಷ್ಣ ಮಂದಿರ ಮಸೀದಿ ಚರ್ಚುಗಳ ಕುರಿತು ನಮ ನಮಗೆ ನೂರು ನಂಬಿಕೆಗಳಿವೆ. ಅವನ್ನು ಭಗವಾನ್ ಅವರು ಏಕೆ ಘಾಸಿಗೊಳ್ಳುತ್ತಾರೆ, ಎನ್ನುತ್ತಾರಲ್ಲ!?
ಭಗವಾನ್ : ವಾಲ್ಮೀಕಿರಾಮಾಯಣದಲ್ಲಿರಾಮನ ಬಾಯಲ್ಲಿ ಮಹಾತ್ಮ ಬುದ್ಧನನ್ನು ಟೀಕಿಸಿದ್ದಾರೆ. ಯಥಾ ಹಿ ಚೋರಃಸತಥಾB ಹಿ ಬುದ್ಧಃ .ತಥಾಗತಂ ನಾಸ್ತಿಕಂ ಅತ್ರ ವಿದ್ಧಿ (ಈ ಬುದ್ಧ ಇದ್ದಾನಲ್ಲ ಇವನು ಕಳ್ಳ, ಇವನು ನಾಸ್ತಿಕ. ಇವನನ್ನು ಯಾರೂ ಗೌರವಿಸಬೇಡಿ ಎಂದುರಾಮನ ಬಾಯಲ್ಲಿ ಭಗವಾನ್ ಬುದ್ಧರನ್ನು ಬೈಯಿಸಿದ್ದಾರೆ. ಇದುಗೌತಮ ಬುದ್ಧರನ್ನು ನಂಬಿದ ಜನಗಳಿಗೆ ನೋವನ್ನು ತರುವುದಿಲ್ಲವೇ? ಬುದ್ಧರನ್ನು ನಂಬಿದ ದೇಶದ ಜನಗಳಿಗೆ ಅವಮಾನವಲ್ಲವೆ? ನಾನು ರಾಮನನ್ನು ಕುರಿತು ಇಂಥ ಯಾವ ಮಾತುಗಳನ್ನೂ ಹೇಳಿಲ್ಲ. ವಾಲ್ಮೀಕಿ ಬರೆದ ಸಂಗತಿಗಳನ್ನು ಮಾತ್ರ ತಿಳಿಸಿದ್ದೇನೆ. ನೀವು ಏನಾದರೂ ಹೇಳಬೇಕಿದ್ದರೆ ವಾಲ್ಮೀಕಿಗೆ ಹೇಳಬೇಕೇ ಹೊರತು ನನಗೆ ಅಲ್ಲ.
ಕ್ರೆöÊಸ್ತ ದೇವಾಲಯ, ಮುಸ್ಲಿಂ ಮಸೀದಿ, ಮಂದಿರಗಳಿವೆ. ಅವರವರ ಆಚರಣೆಗಳು ಅವರ ಮನೆಯ ಹೊಸ್ತಿಲ ಒಳಗೆ ಇರಲಿ.ಅವೆಲ್ಲ ಸಾರ್ವಜನಿಕ ರಸ್ತೆಗೆ ಬರದಂತೆ ನೋಡಿಕೊಳ್ಳಬೇಕು.ಮತಗಳು ನೂರು ಇದ್ದರೂ ಧರ್ಮಒಂದೇ. ಧರ್ಮ ಎಂದರೆ ಸರ್ವರಜೀವರಕ್ಷಣೆ, ಸರ್ವರ ಪರಿಪೋಷಣೆ ಅದನ್ನು ನಾವೆಲ್ಲರೂ ಪಾಲಿಸಬೇಕಾಗಿದೆ.
ಸತ್ಯಂಪೇಟೆ : ನಿಜವಾದ ಧರ್ಮದ ಸೂತ್ರ ಯಾವುದು?
ಭಗವಾನ್ :‘ಇವನಾರನವಇವನಾರವ,ಇವನಾರವಎಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯಾ.ಕೂಡಲ ಸಂಗಮದೇವಾ, ನಿಮ್ಮ ಮನೆಯ ಮಗನೆಂದೆನಿಸಯ್ಯಾ’ ಎಂಬ ಬಸವಣ್ಣನವರ ಮಾತೆಧರ್ಮದ ನಿಜವಾದ ಸೂತ್ರ.
ಸತ್ಯಂಪೇಟೆ : ಜನಗಳಲ್ಲಿ ಬೇರು ಬಿಟ್ಟಿರುವ ಅಜ್ಞಾನದ ಕಸವನ್ನು ತೆಗೆಯುವುದು ಹೇಗೆ? ಪ್ರಜ್ಞಾವಂತನಾದವನು ಏನು ಮಾಡಬೇಕು?
ಭಗವಾನ್ : ನಾವು ನಿತ್ಯ ಮನೆಯಲ್ಲಿ ಕಸವನ್ನು ಗುಡಿಸುವುದಿಲ್ಲವೆ? ಹಾಗೆ ಸಮಾಜದಲ್ಲಿಯೂ ಸಾಕಷ್ಟು ಕಸ ಕ್ಷಣಕ್ಷಣಕ್ಕೂ ಬೀಳುತ್ತಿರುತ್ತದೆ. ದೃಶ್ಯ ಮಾಧ್ಯಮಗಳಂತೂ ಪೈಪೋಟಿಗೆ ಬಿದ್ದು ಪ್ರತಿ ಮನೆ ಮನೆಯಲ್ಲೂ ಅಜ್ಞಾನದ ಕಸವನ್ನು ಹಾಕುತ್ತಿವೆ. ಆದ್ದರಿಂದ ನಾವು ಕಸವನ್ನು ಹೊರಗೆ ಹಾಕಲು ನಾನು ಹೇಳುತ್ತಿರುವೆ. ಕಸವನ್ನೇರಸ ಎಂದು ತಿಳಿದುಕೊಂಡವರು ನನ್ನ ಬರವಣಿಗೆ ಕಂಡು ಕೋಪಗೊಳ್ಳುತ್ತಾರೆ.
ಸತ್ಯಂಪೇಟೆ : ಸಮಾಜದ ಆರೋಗ್ಯ ಸರಿಯಾಗಿರಬೇಕಾದರೆ ಏನು ಮಾಡಬೇಕು?
ಸಮಾಜದ ಹಿತಕ್ಕಾಗಿ, ಏಳಿಗೆಗಾಗಿ ಜ್ಞಾನಿಗಳು ದೊಡ್ಡ ಹೋರಾಟವನ್ನು ಮಾಡಿದ್ದಾರೆ. ತಮ್ಮ ವಿಚಾರಗಳಿಂದ ಸಮಾದಲ್ಲಿ ಹಲವು ಸಂಘರ್ಷಗಳನ್ನು ಎದುರಿಸಿದ್ದಾರೆ.ಅಂತಿಮವಾಗಿಅವರೆಲ್ಲರ ವಿಚಾರಗಳು ವಿಜಯಶಾಲಿಯಾಗಿವೆ.
ಸತ್ಯಂಪೇಟೆ : ಸಮಾಜದಲ್ಲಿ ಆಗಿ ಹೋದ ಮಹಾತ್ಮರೆಲ್ಲರೂ ಹಲವಾರು ನೋವುಗಳಿಗೆ ತುತ್ತಾಗಿದ್ದಾರೆ. ವ್ಯಕ್ತಿಗತವಾಗಿ ಹಲ್ಲೆಗೂ ಒಳಗಾಗಿದ್ದಾರೆ. ಟೀಕೆ ಟಿಪ್ಪಣೆಗಳಿಗೆಗುರಿಯಾಗಿದ್ದಾರೆ. ಇದೆಲ್ಲ ಗೊತ್ತಿದ್ದೂ ತಾವು ತಮ್ಮನ್ನು ಸಂಘರ್ಷಕ್ಕೆ ಒಡ್ಡಿಕೊಳ್ಳಲು ನಿಜವಾದ ಕಾರಣವಾದರೂ ಏನು?
ಭಗವಾನ್ : ಹೌದು, ನಾನೇನು ಸಂಘರ್ಷ ಮಾಡಬೇಕೆಂದು ಹೊರಟಿಲ್ಲ. ಅವರೇ ಅದನ್ನು ಸೃಷ್ಟಿ ಮಾಡುತ್ತಿದ್ದಾರೆ. ನಾನು ಬರೆದ ಮೇಲೆ ನನ್ನ ವಿಚಾರಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದೇನೆ, ಅಷ್ಟೆ. ನನ್ನ ವಿಚಾರಗಳನ್ನು ನಾನು ಸಮರ್ಥಿಸಿಕೊಳ್ಳುವುದು ನನ್ನ ಕರ್ತವ್ಯ. ನನಗೆ ಭಯವಿಲ್ಲ. ಭಯವಿದ್ದರೆ ನಾನು ಬರವಣಿಗೆ ಮಾಡುತ್ತಲೆ ಇರಲಿಲ್ಲ. ನನ್ನ ಬರವಣಿಗೆ ಬೆಳಕಿನೆಡೆಗಿನ ಹೋರಾಟ. ಸಹಜವಾಗಿ ಕತ್ತಲೆಗೆ ಸಿಟ್ಟು ಬರುತ್ತದೆ.ಸತ್ಯದ ವಿಚಾರಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಭೀತಿಯಾದ ಮನಸ್ಥಿತಿಗೆ ಸ್ವಾಮಿ ವಿವೇಕಾನಂದರ ಬರವಣಿಗೆಯೇ ಮೂಲಕಾರಣ. ಸ್ವಾಮಿ ವಿವೇಕಾನಂದರನ್ನು ಕೊಲ್ಲಲ Äಕರ್ಮಠರುಎರಡು ಮೂರು ಸಲ ಪ್ರಯತ್ನಿಸುತ್ತಾರೆ. ಆಗ ಅವರು ನನ್ನ ದೇಹವನ್ನು ಕೊಲ್ಲಬಹುದು. ಆದರೆ ನನ್ನ ಚೇತನಯನ್ನು ಕೊಲ್ಲಲಾಗದು ಎಂದು ಹೇಳಿದರು. ಬಸವಣ್ಣನವರು ಸಹ :
ಅರ್ಥವನರ್ಥವ ಮಾಡಿ ಕೋಳಾಹಳಂಗೈಯ್ಯುತ್ತಿರಲಿ.
ಹುಟ್ಟಿದಮಕ್ಕಳ ನವಖಂಡವ ಮಾಡಿಕಡಿಯುತ್ತಿರಲಿ.
ಮುಟ್ಟುವ ಸ್ತ್ರೀ ಯ ಕಣ್ಣ ಮುಂದೆಅಭಿಮಾನಗೊಂಡು ನೆರೆವುತ್ತಿರಲಿ.
ಇಂತೀತ್ರಿವಿಧವು ಹೊರಗಣವು.
ಇನ್ನೆನಂಗದ ಮೇಲೆ ಬರಲಿ.
ಹಿಡಿಖಂಡವಕೊಯ್ಯಲಿ, ಇಕ್ಕುವ ಶೂಲ ಪ್ರಾಪ್ತಿಸಲಿ.
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ.
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ. ಪ್ರಸಾದಕ್ಕೆತಪ್ಪೆ.
ಇಂತಪ್ಪ ಭಾಷೆಕಿಂಚಿತ್ತು ಹುಸಿಯಾದಡೆ
ನೀನಂದೆಮೂಗಕೊಯಿ ಕೂಡಲಸಂಗಮದೇವಾ.
ಎಂದು ಧೀರೋದಾತ್ತವಾಗಿ ಬದುಕಿ ಹೋದ ಮಾರ್ಗದಲ್ಲಿಯೆ ನನ್ನ ನಡಿಗೆ, ಎಂದುಭಗವಾನರುಗಟ್ಟಿಯಾದದನಿಯಲ್ಲಿ ಮಾತನಾಡಿದರು.
ಸತ್ಯಂಪೇಟೆ : ನಿಮ್ಮನ್ನು ಒಕ್ಕಲಿಗ ಜಾತಿಗೆ ಮಾತ್ರ ಕೆಲವರು ಸೀಮಿತ ಮಾಡಿ ನೋಡುತ್ತಿದ್ದಾರಲ್ಲ!?
ಭಗವಾನ್ : ಇಲ್ಲ. ಬಸವಣ್ಣನವರು ಆನು ಹಾರುವನೆಂದರೆಕೂಡಲ ಸಂಗಮ ನಗುವನಯ್ಯಾ ಎಂದು ಪಾಠ ಹೇಳಿಕೊಟ್ಟಿದ್ದಾರೆ. ಮಹಾಕವಿ ಕುವೆಂಪು ಅವರು“ಎಲ್ಲಿಯೂ ನಿಲ್ಲದಿರು ಮನೆಯನೆಂದೂಕಟ್ಟದಿರು”ಎAದು ಹೇಳಿದ್ದಾರೆ. ಆದ್ದರಿಂದ ನಾನು ಯಾವುದೋ ಒಂದು ಜಾತಿಯಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ವಿಶ್ವಮಾನವ ಆಗಲು ಬಯಸುವೆ.
ಸತ್ಯಂಪೇಟೆ : ಜನರಿಗೆ ಕೊನೆಯದಾಗಿ ನೀವು ಹೇಳುವ ಕಿವಿ ಮಾತುಯಾವುದು?
ಭಗವಾನ್ :ಜನ ಯಾವದೇ ಕಾರಣಕ್ಕೂ ಆವೇಶಕ್ಕೆ ಒಳಗಾಗದೆ ಏನು ಬರೆದಿದೆ ಎಂಬುದನ್ನು ಸರಿಯಾಗಿ ಓದಿ, ಚಿಂತನೆ ಮಾಡಿ, ಸರಿಯೋ ತಪ್ಪೋ ಎಂಬುದು ನಿಮಗೇ ಖಾತ್ರಿಯಾಗುತ್ತದೆ. ನಿಮಗೆ ಇಷ್ಟವಾದರೆ ಓದಿ, ಕಷ್ಟವಾದರೆ ಬಿಟ್ಟು ಬಿಡಿ. ಅದಕ್ಕೆ ಗಲಾಟೆಯನ್ನು ಯಾಕೆ ಮಾಡ್ತೀರಿ? ಪ್ರಪಂಚದಲ್ಲಿ ಬೇಕಾದಷ್ಟು ವಸ್ತುಗಳಿವೆ. ನಮಗೆ ಇಷ್ಟವಾದದ್ದನ್ನು ನಾವು ತೆಗೆದುಕೊಳ್ಳಬೇಕೆ ಹೊರತು ಅದು ಇರಬಾರದು, ಇದು ಇರಬಾರದು ಎಂದು ತಕರಾರು ಮಾಡುವುದಲ್ಲ. ಎಲ್ಲ ಬಗೆಯ ಗ್ರಂಥಗಳನ್ನು ಓದಿರಿ. ಯಾವುದು ಸರಿಯಾದುದು ಎಂದು ಆಲೋಚಿಸಿ.ನಿಮ್ಮ ವಿವೇಚನೆಯೇ ಸರಿಯಾವುದು? ತಪ್ಪು ಯಾವುದು? ಎಂದು ಮಾರ್ಗದರ್ಶನ ನೀಡುತ್ತದೆ.ಆ ಮಾರ್ಗದಲ್ಲಿ ನಡೆಯಿರಿ. ನೀವು ನಡೆಯುವದಾರಿಯಲ್ಲಿ ಯಾವುದೇ ಬಂದರೂ ಪಕ್ಕಕ್ಕೆ ಸರಿಸಿಬಿಡಿ. ನಿಮ್ಮ ಮಾನಸಿಕ ಆರೋಗ್ಯಕ್ಕೆ ವಿವೇಚನೆ ತುಂಬಾ ಅಗತ್ಯ. ನಿಮ್ಮ ಆರೋಗ್ಯದಿಂದ ಸಮಾಜ ಸಮತೋಲನವಾಗಿ ಇರಬಲ್ಲುದು. ಗಟ್ಟಿಯಾದ ನಿಲುವು ನಮ್ಮೊಳಗೆ ಬರಬೇಕಾದರೆ ಮಹಾತ್ಮ ಬುದ್ಧ, ಬಸವಣ್ಣ,ಮಹಾತ್ಮ ಫೂಲೆ, ಸ್ವಾಮಿ ವಿವೇಕಾನಂದ, ಪೆರಿಯಾರ್,ಅಂಬೇಡ್ಕರ್, ನಾರಾಯಣಗುರು, ಕುವೆಂಪು ಇನ್ನಿತರ ಶರಣರನ್ನು ಓದಿಕೊಳ್ಳಬೇಕು. ವಿಶ್ವಜ್ಞಾನಿ ಅಂಬೇಡ್ಕರ್ ಅವರಂತೆಎಲ್ಲವನ್ನೂ ಶೋಧಿಸುವುದನ್ನು ನಾವು ಕಲಿತುಕೊಳ್ಳಬೇಕು.ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು.ಎಂದು ಮನವಿ ಮಾಡುತ್ತೇನೆ.
೦ ವಿಶ್ವಾರಾಧ್ಯ ಸತ್ಯಂಪೇಟೆ