
ಬೂಕರ್ ಪ್ರಶಸ್ತಿ ಪಡೆದ ನಂತರ ಬಾನು ಮುಷ್ತಾಕ್ ಅವರ ಜೊತೆ ಲಂಕೇಶ್ ಅವರನ್ನು ನೆನಪಿಸಿಕೊಂಡವರಲ್ಲಿ ನಾನೇ ಮೊದಲಿಗನಿರಬಹುದು. ಅದಕ್ಕೆ ಕೈ,ಕಾಲು, ಬಾಲ- ಕೋಡುಗಳೆಲ್ಲ ಮೂಡಿ ಚರ್ಚೆ ಎಲ್ಲಿಂದ ಎಲ್ಲೋ ಹೋಗಿ ಮುಟ್ಟಿದೆ. ನಾನು ಬಹಳ ಸರಳವಾಗಿ ‘’ ಬಾನು ಮುಷ್ತಾಕ್ ಅವರನ್ನು ನಮ್ಮಂತವಹರಿಗೆ ಪರಿಚಯಿಸಿದ ಪಿ.ಲಂಕೇಶ್ ಅವರಿಗೂ ಅಭಿನಂದನೆಗಳು’’ ಎಂದು ಬರೆದಿದ್ದೆ. ಅದರ ನಂತರ ಬಾನು ಅವರ ಪತಿ ಮುಷ್ತಾಕ್ ಅವರಿಗೂ ಅಭಿನಂದನೆಗಳು ಎಂದು ಬರೆದೆ. ಎರಡನೆಯ ಅಭಿನಂದನೆ ನಮ್ಮ ಕೆಲವು ಮಹಿಳಾ ಲೇಖಕಿಯರನ್ನು ಕೆರಳಿಸಿಬಿಟ್ಟಿತು. ನಾನು ಬಾನು ಮುಷ್ತಾಕ್ ಅವರನ್ನು ಅರ್ಥಮಾಡಿಕೊಂಡ ಹಾಗೆ ಅವರು ಕೂಡಾ ನನ್ನ ಈ ಎರಡು ಅಭಿಪ್ರಾಯಗಳನ್ನು ನಿರಾಕರಿಸಲಾರರು ಎಂದು ನಂಬಿದ್ದೇನೆ, ನೋಡೋಣ.
ಭಾರತದ ಸಾಮಾಜಿಕ ವ್ಯವಸ್ಥೆಗೆ ಕುರುಡರಾಗಿರುವವರು ಮಾತ್ರ ಅವಕಾಶ ಮತ್ತು ಪ್ರಾತಿನಿಧ್ಯದ ಪಾತ್ರವನ್ನು ನಿರಾಕರಿಸಲು ಸಾಧ್ಯ. ಮುಸ್ಲಿಮ್ ಸಮುದಾಯದಲ್ಲಿ ಬರವಣಿಗೆಯ ಪ್ರಯತ್ನ ಮಾಡಿದ್ದ ಮಹಿಳೆಯರಲ್ಲಿ ಬಾನು ಮುಷ್ತಾಕ್ ಇಲ್ಲವೆ ಸಾರಾ ಅಬೂಬಕರ್ ಮೊದಲಿಗರಾಗಿರಲಿಕ್ಕಿಲ್ಲ. ಅವಕಾಶ ಇಲ್ಲದೆ ಇಂತಹ ಎಷ್ಟು ಪ್ರತಿಭೆಗಳು ಕಮರಿಹೋಗಿದೆಯೋ ಗೊತ್ತಿಲ್ಲ. ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಧಾರವಾಹಿಯಾಗಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದಾಗ ಸಾರಾ ಅವರಿಗೆ 45 ವರ್ಷ ವಯಸ್ಸು. ಅದಕ್ಕಿಂತ ಮೊದಲು ಅವರ ಕೃತಿಗಳು ಯಾಕೆ ಪ್ರಕಟವಾಗಿಲ್ಲ ಎಂದರೆ ಅವಕಾಶ ಸಿಕ್ಕಿಲ್ಲ ಎಂದೇ ಅರ್ಥ.
ಬರವಣಿಗೆ ಎನ್ನುವುದು ಗೋಡೆ ಬರಹ ಅಲ್ಲ, ಅದು ಓದುಗರನ್ನು ತಲುಪಬೇಕಾದರೆ ಪತ್ರಿಕೆ, ಪುಸ್ತಕ ಮೊದಲಾದ ಸಾಧನಗಳು ಬೇಕಾಗುತ್ತದೆ. ಅವಕಾಶವನ್ನು ನೀಡುವ ಸಂಪಾದಕರು, ಪ್ರಕಾಶಕರು ಬೇಕಾಗುತ್ತಾರೆ.. ಇದು ಕೂಡಿ ಬರದೆ ಇದ್ದಾಗ ಪ್ರತಿಭೆಗಳು ಮನೆಯೊಳಗೆ ಹುಟ್ಟಿ ಹೊಸಿಲು ದಾಟಲಾಗದೆ ಮುರುಟಿಹೋಗುತ್ತವೆ. ನಮ್ಮ ಪತ್ರಿಕೆಗಳ ಸಂಪಾದಕರು ಮತ್ತು ಪುರವಣಿಗಗಳ ಸಂಪಾದಕರು ನಡೆಸಿರುವ ಮತ್ತು ಈಗಲೂ ನಡೆಸುತ್ತಿರುವ ಸಾಹಿತ್ಯದ ರಾಜಕೀಯದ ಬಗ್ಗೆ ಬರೆದರೆ ಅದೇ ಒಂದು ಕಾದಂಬರಿಯಾಗಬಹುದು.
ಈ ಕಟು ವಾಸ್ತವದ ಹಿನ್ನೆಲೆಯಲ್ಲಿ ಲೇಖಕ ಇಲ್ಲವೇ ಲೇಖಕಿಯ ಯಶಸ್ಸನ್ನು ಸಂಭ್ರಮಿಸುವಾಗ ಅವರಿಗೆ ಬೆಂಬಲವಾಗಿ ನಿಂತವರನ್ನು ನೆನಪು ಮಾಡಿಕೊಂಡ ಮಾತ್ರಕ್ಕೆ ಆ ಲೇಖಕ/ಲೇಖಕಿಯ ಮಹತ್ವವನ್ನು ಕಡೆಗಣಿಸಿದಂತಾಗುತ್ತದೆ ಎನ್ನುವುದು ಅತಿರೇಕದ ತೀರ್ಮಾನ.
ಅವಕಾಶ ಪಡೆದವರೆಲ್ಲರೂ ಅದನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವ ಖಾತರಿ ಇಲ್ಲ ಎನ್ನುವುದೂ ನಿಜ. ಲಂಕೇಶ್ ಶಿಷ್ಯರೆಂದು ಹೇಳಿಕೊಳ್ಳುವ ಕೆಲವರು ನೈತಿಕವಾಗಿ ತಲುಪಿರುವ ಅಧೋಗತಿಯೇ ಇದಕ್ಕೆ ಉದಾಹರಣೆ. ಬಾನು ಮುಷ್ತಾಕ್, ಸಾರಾ ಅಬೂಬಕರ್ ಮೊದಲಾದವರ ಬಗ್ಗೆ ನಮ್ಮ ಗೌರವ ಇಮ್ಮಡಿಯಾಗಲು ಇದೂ ಕಾರಣ.
ಬಾನು ಅವರ ಪತಿಯನ್ನು ನೆನಪು ಮಾಡಿಕೊಳ್ಳಲು ಕೂಡಾ ಕಾರಣ ಇದೆ. ಬಂಡಾಯಗಾರರು ಎಂದು ಹೇಳಿಕೊಳ್ಳುವ ನಮ್ಮ ಎಷ್ಟು ಮುಸ್ಲಿಮ್ ಲೇಖಕರು-ಪತ್ರಕರ್ತರು ತಮ್ಮಪತ್ನಿ ಮತ್ತು ಮಕ್ಕಳನ್ನು ಕನಿಷ್ಠ ಬುರ್ಕಾ ಹಾಕದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಬಿಟ್ಟಿದ್ದಾರೆ? ಇಂತಹ ಸ್ಥಿತಿಯಲ್ಲಿ ಹಾಸನದಂತಹ ಸಣ್ಣ ನಗರದಲ್ಲಿ ಕನ್ನಡಕದ ವ್ಯಾಪಾರ ಮಾಡಿಕೊಂಡಿರುವ ಒಬ್ಬ ಸಾಮಾನ್ಯ ಮುಸ್ಲಿಮ್ ಪತಿ ತನ್ನ ಪತ್ನಿಯ ಪ್ರಗತಿ ಪರ ನಡೆ-ನುಡಿಗಳಿಂದ ಎಷ್ಟೊಂದು ಬಗೆಯ ಒತ್ತಡ-ಬೆದರಿಕೆಗಳನ್ನು ತಮ್ಮದೇ ಸಮುದಾಯದಿಂದ ಎದುರಿಸಿರಬಹುದು ಎಂದು ಯೋಚನೆ ಮಾಡಿದರೆ ಅವರ ಮಹತ್ವ ಗೊತ್ತಾಗುತ್ತದೆ. ಇಂತಹ ಸ್ಥಿತಿಯಲ್ಲಿ ಬಾನು ಮುಷ್ತಾಕ್ ಅವರ ಯಶಸ್ಸಿನ ಒಂದು ಸಣ್ಣಪಾಲನ್ನು ಮುಷ್ತಾಕ್ ಅವರಿಗೆ ನೀಡಿದರೆ ಬಾನು ಅವರ ತೂಕ ಕಡಿಮೆ ಮಾಡಿದಂತಾಗುತ್ತದೆಯೇ?
ನಾನು ಯಾವಾಗಲು ಹೇಳುತ್ತಾ ಇರುವುದನ್ನು ಹೇಳಿಬಿಡುತ್ತೇನೆ. ಕನ್ನಡದ ನೂರು ಪ್ರತಿಭಾವಂತ ಕವಿಗಳು, ಕತೆಗಾರರು, ಕಾದಂಬರಿಕಾರರ ಪಟ್ಟಿ ಮಾಡಿದರೆ ಅದರಲ್ಲಿ ಕನಿಷ್ಠ 50ರಷಷ್ಟು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಆದರೆ ನೂರು ಪತ್ರಕರ್ತರ ಪಟ್ಟಿ ಮಾಡಿದರೆ ಅದರಲ್ಲಿ ಹತ್ತು ಮಂದಿಯನ್ನು ಹುಡುಕಬೇಕಾದರೆ ದುರ್ಬೀನು ಹಿಡಿಯಬೇಕಾಗುತ್ತದೆ. ಪತ್ರಿಕಾ ವೃತ್ತಿ ಎನ್ನುವುದು ರಾಕೆಟ್ ಸಾಯನ್ಸ್ ಏನಲ್ಲ. ಹಾಗಿದ್ದರೂ ಯಾಕೆ ಪ್ರಾತಿನಿಧ್ಯ ಇಲ್ಲ.
ಯಾಕೆಂದರೆ ಕವಿಯೋ, ಕತೆಗಾರನೋ ಬರೆದುದನ್ನು ತಾನೇ ಪ್ರಕಟಿಸಿ ಪುಕ್ಕಟೆಯಾಗಿ ಹಂಚಿಯೂ ಕವಿಯೋ, ಕತೆಗಾರನೋ ಆಗಬಹುದು. ಆದರೆ ಪತ್ರಕರ್ತನೆನಿಸಿಕೊಳ್ಳಲು ಯಾವುದಾದರೂ ಪತ್ರಿಕೆಯಲ್ಲಿ ಉದ್ಯೋಗಿಯಾಗುವ ಅವಕಾಶ ಸಿಗಬೇಕು. ಯಾರು ಅವಕಾಶ ಕೊಡುತ್ತಾರೆ? ಓದುಗನೇ ಪತ್ರಕರ್ತನಾಗಿರುವ ಈಗಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಅಭಿವ್ಯಕ್ತಿಗೆ ಹೊಸ ಮಾರ್ಗಗಳು ತೆರೆದುಕೊಂಡಿರುವುದರಿಂದ ಹಿಂದಿನದಕ್ಕಿಂತಲೂ ಹೆಚ್ಚು ಅವಕಾಶಗಳು ಇದೆ ಎನ್ನುವುದು ನಿಜ.
ಮನುಷ್ಯ ಮೂಲತ: ಪರಿಸರದ ಕೂಸು. ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಪರಿಸರದ ಪಾತ್ರ ಇದ್ದೇ ಇರುತ್ತದೆ. ಅದನ್ನು ನೆನಪು ಮಾಡಿಕೊಳ್ಳದೆ ಇರುವುದು ಆತ್ಮದ್ರೋಹವೇ ಸರಿ.
ನನ್ನಿಂದಲೇ ಶುರು ಮಾಡುತ್ತೇನೆ, ವಡ್ಡರ್ಸೆಯವರು ಅವಕಾಶ ನೀಡಿದ್ದು ಮಾತ್ರವಲ್ಲ ವೈಚಾರಿಕವಾದ ಸ್ಪಷ್ಟತೆಯೊಂದಿಗೆ ಬರವಣಿಗೆ ಮಾಡಲು ಪ್ರೇರೆಪಿಸದೆ ಇದ್ದಿದ್ದರೆ ನಾನು ಖಂಡಿತ ಪತ್ರಕರ್ತನಾಗುತ್ತಿರಲಿಲ್ಲ, ಬೀದಿಗೆ ಬೀಳುತ್ತಿರಲಿಲ್ಲ ನಿಜ, ಎಲ್ಲಿಯೋ ಬ್ಯಾಂಕಿನಲ್ಲಿಯೋ , ಇನ್ಸುರೆನ್ಸ್ ಕಂಪೆನಿಯಲ್ಲಿ ಕೆಲಸಮಾಡುತ್ತಾ ಅತೃಪ್ತಿ, ಅಸಮಾಧಾನ, ಸಿನಿಕತನದ ಮುದ್ದೆಯಾಗಿ ಬದುಕಿಯೂ ಸತ್ತವನ ಹಾಗೆ ಇರುತ್ತಿದ್ದೆ. ಮುಂಗಾರು ಪತ್ರಿಕೆಯಲ್ಲಿ ಎನ್.ಎಸ್.ಶಂಕರ್, ಕೆ.ಪುಟ್ಟಸ್ವಾಮಿ ಮೊದಲಾದವರ ಜೊತೆಯಲ್ಲಿ ನಾವಿದ್ದದ್ದೇ 3-4 ತಿಂಗಳು. ಆದರೆ ಇವರನ್ನೂ ನಾನು ಗುರುಗಳೆಂದೇ ತಿಳಿದುಕೊಂಡಿದ್ದೇನೆ.
ಮುಂಗಾರು ಮುಚ್ಚುವ ಸ್ಥಿತಿಯಲ್ಲಿದ್ದಾಗ ಕೆ.ಎನ್.ಹರಿಕುಮಾರ್ ಅವರು ಕರೆಸಿ ಕೆಲಸ ಕೊಡದೆ ಇದ್ದಿದ್ದರೆ ನಾನು ಈ ವೃತ್ತಿಯಲ್ಲಿ ಮುಂದುವರಿಯುತ್ತಿರಲಿಲ್ಲ. ಅವರು ನನ್ನನ್ನು ದೆಹಲಿಗೆ ಕಳಿಸದೆ ಇದ್ದಿದ್ದರೆ ನಾನು ವೃತ್ತಿಜೀವನ ಈಗಿನ ತಿರುವು ಪಡೆಯುತ್ತಿರಲಿಲ್ಲ. ದೆಹಲಿಯಿಂದ ನಾನು ಅಂಕಣ ಬರೆಯಲ ಹೊರಟಾಗ ದಂಡ-ಪಿಂಡ-ಪುಂಡರೆಲ್ಲ ಸೇರಿ ಅಡ್ಡಗಾಲು ಹಾಕುತ್ತಿದ್ದ ಸಂದರ್ಭದಲ್ಲಿ ಕೆ.ಎನ್.ಶಾಂತಕುಮಾರ್ ಬೆನ್ನಹಿಂದೆ ನಿಲ್ಲದೆ ಇದ್ದಿದ್ದರೆ ನಾನು ಅಂಕಣಕಾರನಾಗಿ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ.
ನಾನು ಬಯಸಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನಾಗಿದ್ದಲ್ಲ, ಮೊದಲ ಒಂದೆರಡು ವರ್ಷ ಪತ್ರಿಕಾ ವೃತ್ತಿ ಬಿಟ್ಟುಬಂದಿದ್ದಕ್ಕಾಗಿ ಅಪರಾಧಿ ಪ್ರಜ್ಞೆಯಿಂದ ನರಳುತ್ತಾ ಇದ್ದದ್ದು ಕೂಡಾ ನಿಜ. ಆದರೆ 2013ರ ನಂತರ ಬದಲಾದ ಮಾಧ್ಯಮ ಕ್ಷೇತ್ರದ ಸ್ಥಿತಿ ನೋಡಿದರೆ ನಾನು ಅಲ್ಲಿ ಮುಂದುವರಿದಿದ್ದರೂ ನಾನೂ ಗೋಧಿ ಮೀಡಿಯಾದ ಭಾಗವಾಗಿ ನರಳಾಡುತ್ತಾ ಬದುಕುತ್ತಿದ್ದೆ. ಅಂತಹ ಸ್ಥಿತಿಯಿಂದ ನನ್ನನ್ನು ಪಾರು ಮಾಡಿ ಸಿದ್ದರಾಮಯ್ಯನವರು ತನ್ನ ಬಳಿ ಕರೆಸಿಕೊಂಡು ಅವಕಾಶ ನೀಡದೆ ಇರುತ್ತಿದ್ದರೆ ನಾನು ಬಾಯಿ ಬಂದ್ ಮಾಡಿಕೊಂಡು ಮೂಲೆ ಸೇರಿ ಎಷ್ಟೋ ವರ್ಷಗಳಾಗಿರುತ್ತಿತ್ತು.
ಹೀಗೆಲ್ಲ ಇರುವಾಗ ಅವಕಾಶ ಕೊಡಲು ಅವರೆಲ್ಲ ಯಾರ್ರಿ ?
‘’ನನ್ನಲ್ಲಿ ಪ್ರತಿಭೆ ಇತ್ತು ನಾನು ಬೆಳೆದೆ’’ ಎಂದು ನಾನೇನಾದರೂ ಒದರಿದರೆ ನನಗಿಂತ ನೀಚ, ಅಧಮ, ಸ್ವಾರ್ಥಿ ಬೇರೆ ಯಾರೂ ಇಲ್ಲ.
– Dinesh Aminmattu